ಮೈಸೂರು: 74ನೆ ಗಣತಂತ್ರದ ದಿನದ ಅಂಗವಾಗಿ ನಿಮಗೆ ಕೋಟಿ ಕೋಟಿ ಶುಭಾಷಯಗಳು. ನಾವಿಂದು ಸೇರಿರುವ ಕಾರ್ಯಾಲಯದ ಇತಿಹಾಸ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಜತೆ ಬೆಸೆದುಕೊಂಡಿದೆ. ಇಂದು ನಾವು ಗಣತಂತ್ರ ಆಚರಿಸುವಾಗ ಕಾಂಗ್ರೆಸ್ ನ ಎಲ್ಲ ಕಾರ್ಯಕರ್ತರಲ್ಲಿ ಒಂದು ಮಾತು ಹೇಳಬಹಯಸುತ್ತೇನೆ. 1950ರ ಜನವರಿ 26ರ ದಿನ ಪ್ರತಿಯೊಬ್ಬರ ಮನದಲ್ಲಿ ಅವಿಸ್ಮರಣೀಯವಾಗಿ ಉಳಿದಿದೆ. ಪ್ರತಿ ವರ್ಷ ಜ.26ರಂದು ಗಣತಂತ್ರ ದಿನವನ್ನು ಆಚರಿಸುತ್ತೇವೆ. ಆದರೆ ಇಲ್ಲಿರುವ ಕಾಂಗ್ರೆಸಿಗರು ಈ ಗಣತಂತ್ರದ ವಿಕಾಸ, ಗಣತಂತ್ರದ ಸಂವಿಧಾನ, ಗಣತಂತ್ರದ ಸುರಕ್ಷತೆಯನ್ನು ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ಮಾತನಾಡಿದರು.
ಅವರು ಮೈಸೂರಿನ ಕೆಪಿಸಿಸಿ ಕಚೇರಿಯಲ್ಲಿ ಗಣರಾಜ್ಯೋತ್ಸವ ದಿನಾಚರಣ ಸಂದರ್ಭದಲ್ಲಿ ಮಾತನಾಡಿದರು.
ಗಣತಂತ್ರ ಎಂದರೆ ಏನು? ಇಂದು ನಾವೆಲ್ಲರು ಈ ಪ್ರಶ್ನೆ ಕೇಳಿಕೊಳ್ಳಬೇಕಿದೆ. ಭಾರತದ ಗಣತಂತ್ರ ಎಂದರೆ ಈ ಒಂದು ದಿನವನ್ನು ಗಣತಂತ್ರ ಎನ್ನುತ್ತಾರಾ? ಕೇವಲ ಗಾಂಧಿಜೀ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದು ಕಾರ್ಯಕ್ರಮ ಆಚರಿಸುವುದು ಗಣತಂತ್ರವೇ? ಗಣತಂತ್ರ ಎಂದರೆ ಸಂವಿಧಾನ ಪುಸ್ತಕದ ಹೆಸರಲ್ಲ. ಇದು ದೇಶದ 140 ಕೋಟಿ ಜನರ ಹೆಸರಾಗಿದೆ. ಆದರೆ ದುರ್ದೈವ ಎಂದರೆ ಇಂದು ದೇಶದ ಗಣತಂತ್ರಯ ವ್ಯವಸ್ಥೆ ಹಾಗೂ ದೇಶದ ಜನರ ಮೇಲೆ ದಾಳಿ ನಡೆಯುತ್ತಿದೆ.
ಕಾರಣ, ಗಣತಂತ್ರ ಎಂದರೆ ಸ್ವಾಂತಂತ್ರ್ಯ, ಸಮಾನತೆ, ನ್ಯಾಯ, ಸಾಮಾಜಿಕ ನ್ಯಾಯ, ಬೇಧಬಾವ ತೊಲಗಿಸುವ, ಧರ್ಮ ಜಾತಿ ಹೆಸರಿನಲ್ಲಿರುವ ಅಸಮಾನತೆ ತೊಡೆದುಹಾಕುವ, ಸಂವಿಧಾನ ಹಾಗೂ ಅದರ ಮೂಲಭೂತ ಉದ್ದೇಶಗಳನ್ನು ರಕ್ಷಿಸುವ ಸಂಕಲ್ಪ ಮಾಡುವುದು ಗಣತಂತ್ರ ದಿನವಾಗಿದೆ. ಕಾಂಗ್ರೆಸಿಗರೂ ಸೇರಿದಂತೆ ಪ್ರತಿಯೊಬ್ಬ ಭಾರತೀಯರು ಗಣತಂತ್ರದ ಸುರಕ್ಷತೆ ಮಾಡದೇ ಈ ಗಣತಂತ್ರ ದಿನವನ್ನು ಆಚರಿಸುವುದರಲ್ಲಿ ಅರ್ಥವಿಲ್ಲ. ಇಂದು ದೇಶದ ಸಂವಿಧಾನ, ಮೂಲಭೂತ ಸಿದ್ಧಾಂತ ರಕ್ಷಣೆ ಮಾಡಬೇಕಿದೆ.
ನಾವು ಒಬ್ಬರಿಗೊಬ್ಬರು, ಬಣ್ಣ, ಉಡುಗೆ, ಭಾಷೆ ವಿಚಾರವಾಗಿ ಭಿನ್ನತೆ ಇದೆ. ದೇಶದ ಜನರಲ್ಲಿ ಎಲ್ಲಿಯವರೆಗೂ ಈ ವಿಚಾರವಾಗಿ ಬೇಧಬಾವ ಇರುತ್ತದೆಯೋ, ಜಾತಿ ಧರ್ಮದ ಹೆಸರಲ್ಲಿ ವಿಭಜನೆ ಮಾಡಲಾಗುತ್ತದೆಯೋ, ಅನ್ಯಾಯ ಮಾಡುವುದನ್ನು ನಿಲ್ಲಿಸುವವರೆಗೂ ಗಣತಂತ್ರ ಪೂರ್ಣಗೊಳ್ಳುವುದಿಲ್ಲ. ನಾವು ಸಂವಿಧಾನದ ಹೆಸರಲ್ಲಿ ಅಧಿಕಾರಕ್ಕೆ ಬಂದು ರಾಜರಂತೆ ಆಳ್ವಿಕೆ ಮಾಡಲು ನಮ್ಮ ಮಹಾನ್ ನಾಯಕರು ಸಂವಿಧಾನವನ್ನು ನೀಡಿಲ್ಲ. ರಾಜಪ್ರಭುತ್ವವನ್ನು ಅಂತ್ಯಗೊಳಿಸಿ ಪ್ರಜೆಗಳೇ ಅಧಿಕಾರ ನಡೆಸಲು ಪ್ರಜಾಪ್ರಭುತ್ವವವನ್ನು ಅಸ್ಥಿತ್ವಕ್ಕೆ ತರಲಾಗಿದೆ. ಆದರೆ ಪ್ರಸ್ತುತ ಸರ್ಕಾರ ಸಂವಿಧಾನ ಹಾಗೂ ಅದರ ಮೌಲ್ಯಗಳ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ.
1950, ಜ.26ರಂದೇ ಗಣತಂತ್ರವನ್ನು ಏಕೆ ಆಚರಣೆ ಮಾಡುತ್ತಿದ್ದೇವೆ ಎಂದು ಗೊತ್ತಿದೆಯೇ? ಇದೇ ದಿನ ಸಂವಿಧಾನವನ್ನು ಯಾಕೆ ಜಾರಿಗೊಳಿಸಲಾಯಿತು? ಕಾರಣ 1926 ಜ.26ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬ್ರಿಟೀಷ್ ಸರ್ಕಾರವನ್ನು ವಿರೋಧಿಸಿ, ಪೂರ್ಣ ಸ್ವರಾಜ್ಯಕ್ಕೆ ಆಗ್ರಹಿಸಲಾಯಿತು. ಈ ಕಾರಣಕ್ಕೆ ಜ.26ರಂದೇ ನಮ್ಮ ದೇಶದ ಸಂವಿಧಾನವನ್ನು ಈ ದಿನಾಂಕದಂದು ಜಾರಿಗೆ ತಂದು ಗಣತಂತ್ರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಈ ದಿನ ದೇಶದಲ್ಲಿ ಜನರಿಗೆ ಪೂರ್ಣ ಸ್ವರಾಜ್ಯ ದೊರಕಿಸಿ ಕೊಡಬೇಕು ಎಂಬ ಸಂಕಲ್ಪ ತೊಟ್ಟ ದಿನ.
ಅಂದು ಬ್ರಿಟೀಷರ ಪರವಾಗಿದ್ದ ವಂಶಸ್ಥರು, ಅಂದು ದೇಶವನ್ನು ವಿಭಜನೆ ಮಾಡುವ ಆಗ್ರಹ ಮಾಡುತ್ತಿದ್ದವರ ಜತೆ ಸೇರಿ ಬಂಗಾಳ ಹಾಗೂ ಸಿಂಧ್ ಪ್ರಾಂತ್ಯದಲ್ಲಿ ಸರ್ಕಾರ ಮಾಡಿದವರು ಇಂದು ದೇಶದ ಆಡಳಿತ ಗದ್ದುಗೆ ಮೇಲೆ ಕೂತಿದ್ದಾರೆ. ಕಾಂಗ್ರೆಸ್ ಪಕ್ಷ ಅಸಮಾನತೆ, ಗುಲಾಮಗಿರಿ, ಸಮಾಜದಲ್ಲಿ ಜಾತಿ, ಧರ್ಮಗಳ ದ್ವೇಷದ ವಿರುದ್ಧ ಹೋರಾಡಿದೆ. ಮಹಿಳೆ ಹಾಗೂ ಪುರುಷರ ನಡುವೆ ಅಂತರವಿಲ್ಲ, ಸತಿ ಪದ್ಧತಿ ವಿರುದ್ಧ ಕಾಂಗ್ರೆಸ್ ಹೋರಾಡಿದೆ. ದಲಿತರು, ಆದಿವಾಸಿಗಳ ರಕ್ಷಣೆಗಾಗಿ ಹೋರಾಟದ ಪರಿಣಾಮವಾಗಿ ಸಂವಿಧಾನ ಬಂದಿದೆ. ಇಂದು ಅಧಿಕಾರದಲ್ಲಿರುವವರು ಈ ವಿಚಾರವಾಗಿ ಅಸಮಾನತೆ ಮಾಡಿದರೆ ಕಾಂಗ್ರೆಸಿಗರಾಗಿ ನಾವು ಹೋರಾಟ ಮಾಡಬೇಕು. ಯಾವುದೇ ಜಾತಿ, ಧರ್ಮ, ಸಮುದಾಯದ ವ್ಯಕ್ತಿ ಅಸಮಾನತೆ ಉಂಟಾದರೆ ಅದು ದೇಶದ ಸಂವಿಧಾನದ ಮೇಲಿನ ದಾಳಿಯಾಗುತ್ತದೆ.
ನಮ್ಮ ದೇಶದಲ್ಲಿ ಹಿಂದೂ ಧರ್ಮ ಪ್ರಬಲ ಧರ್ಮವಾದರೂ ಸಂವಿಧಾನದಲ್ಲಿ ಎಲ್ಲ ಧರ್ಮದವರನ್ನು ಸಮಾನವಾಗಿ ಕಾಣುತ್ತೇವೆ ಎಂದು ಉಲ್ಲೇಖಿಸಲಾಗಿದೆ. ಇಂದು ದೇಶದ ಎಲ್ಲಾ ಸಂಪತ್ತನ್ನು ಕೆಲವರ ನಿಯಂತ್ರಣಕ್ಕೆ ಸೇರುವಂತೆ ಮಾಡುತ್ತಿದ್ದರೆ ಅದೂ ಕೂಡ ಗಣತಂತ್ರದ ವಿರುದ್ಧವಾಗಿದೆ. ನಮ್ಮ ಸಂವಿಧಾನದಲ್ಲಿ ಆರ್ಥಿಕ, ಸಾಮಾಜಿಕ, ರಾಜನೀತಿಯ ಸಮಾನತೆಯನ್ನು ಸಾರುತ್ತದೆ. ಹೀಗಾಗಿ ಈ ಸಂವಿಧಾನ ರಕ್ಷಣೆ ಪ್ರತಿಯೊಬ್ಬ ಕಾಂಗ್ರೆಸಿಗನ ಕರ್ತವ್ಯವಾಗಿದೆ.
ಅದೇ ಸಂಧರ್ಭದಲ್ಲಿ ಡಿ.ಕೆ. ಶಿವಕುಮಾರ್ ಜನರನ್ನು ಉದ್ದೇಶಿಸಿ ಮಾತನಾಡಿದರು.
ಇಂದು ನಾವೆಲ್ಲರೂ 74ನೇ ಗಣರಾಜ್ಯೋತ್ಸವ ದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷನಾಗಿ ಮೊದಲ ಬಾರಿಗೆ ಈ ಐತಿಹಾಸಿಕ ಭೂಮಿಯಲ್ಲಿ ರಾಷ್ಟ್ರಧ್ವಜ ಆರಿಸಿ ಈ ದಿನ ಆಚರಣೆ ಮಾಡುತ್ತಿದ್ದೇನೆ.
ಇಂದು ಭಾರತಕ್ಕೆ ಸಂವಿಧಾನ ಕೊಟ್ಟ ಪವಿತ್ರ ದಿನ. ಕಾಂಗ್ರೆಸ್ ಈ ಪವಿತ್ರ ಗ್ರಂಥ ಕೊಟ್ಟು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಶಕ್ತಿ ತುಂಬಿದ ದಿನ. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ದಿನ.
ನೆಹರೂ ಅವರು ಅಧ್ಯಕ್ಷತೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಅವರ ದೂರದೃಷ್ಟಿ ಹಾಗೂ ಕೊಡುಗೆಯನ್ನು ನೆನಪಿಸಿಕೊಳ್ಳಲಿದ್ದರೆ ಕರ್ತವ್ಯಲೋಪವಾಗಲಿದೆ. ಹೀಗಾಗಿ ನಾವೆಲ್ಲರೂ ಅವರನ್ನು ಸ್ಮರಿಸಿ, ಅಭಿನಂದನೆ ಸಲ್ಲಿಸಬೇಕು.
ಪ್ರತಿ ಪ್ರಜೆಗೂ ಮೂಲಭೂತ ಹಕ್ಕು ನೀಡಿ, ಅವರ ರಕ್ಷಣೆ ಮಾಡುತ್ತಿದ್ದೇವೆ. ಕಾಂಗ್ರೆಸಿಗರು ಹಾಗೂ ಪ್ರತಿ ಭಾರತೀಯನ ಕರ್ತವ್ಯ ಎಲ್ಲ ಭಾಷೆ, ಧರ್ಮ, ಸಂಸ್ಕೃತಿ ಜತೆಗೆ ಸಂವಿಧಾನದ ರಕ್ಷಣೆ.
ಇದು ದೇಶದ ಹಬ್ಬ. ಈ ಹಬ್ಬಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ. ಭಾರತದ ಸಂವಿಧಾನ ಜಾತ್ಯಾತೀತ ತತ್ವದ ಮೇಲೆ ಸರ್ವರಿಗೂ ಶಕ್ತಿ ಕೊಟ್ಟಿತು. ಇಷ್ಟು ಕಾಲ ಈ ತತ್ವದ ಮೇಲೆ ಸಾಗಿಬಂದ ಹಿನ್ನೆಲೆಯಲ್ಲಿ ಭಾರತ ಇಂದು ಅಭಿವೃದ್ಧಿಶೀಲ ರಾಷ್ಟ್ರವಾಗಿ ಬೆಳೆದಿದೆ.
ಸಂವಿಧಾನದ ತತ್ವ ಸಿದ್ಧಾಂತವೇ ಕಾಂಗ್ರೆಸ್ ನ ತತ್ವ ಸಿದ್ಧಾಂತ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ತಂದ ಸಾಂವಿಧಾನಿಕ ತಿದ್ದುಪಡಿಗಳು, ನೀತಿಗಳ ಮೂಲಕ ಈ ದೇಶ ಕಟ್ಟಲಾಗಿದೆ.
ಈಗ ಜಾತಿ, ಧರ್ಮ, ಭಾಷೆ ಮತ್ತಿತರ ವಿಚಾರದಲ್ಲಿ ದ್ವೇಷ ಬಿತ್ತಿ ಸಮಾಜ ಒಡೆಯುವ ಕಾರ್ಯಕ್ಕೆ ಕೆಲವರು ಮುಂದಾಗಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ಈ ವಿಚಾರವಾಗಿ ಅರಿವು ಮೂಡಿಸಬೇಕು. ನಮ್ಮ ರಕ್ಷಣೆ ಮಾಡುತ್ತಿರುವ ಸಂವಿಧಾನ ಬದಲಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಆದರೆ ನಮ್ಮ ನಿಮ್ಮೆಲ್ಲರ ಗಟ್ಟಿತನ, ಅಂಬೇಡ್ಕರ್ ಅವರ ವಾದ, ಗಾಂಧಿ, ನೆಹರೂ, ಸರ್ದಾರ್ ಪಟೇಲರು ಹಾಕಿರುವ ಭದ್ರ ಬುನಾದಿ ಮೂಲಕ ಅದನ್ನು ಉಳಿಸಿಕೊಂಡು ಬಂದಿದ್ದೇವೆ.
ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳ ಮೇಲೆ ಒಂದು ಭಾಷೆಯನ್ನು ಹೇರಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ನಾವು ಯಾವುದೇ ಅವಕಾಶ ನೀಡುತ್ತಿಲ್ಲ. ನಮ್ಮ ನೋಟು ನೋಡಿ, ಅದರಲ್ಲಿ ವಿವಿಧ ಪ್ರಾಂತೀಯ ಭಾಷೆಗಳಿದ್ದು, ಆ ಪೈಕಿ ಕನ್ನಡವೂ ಒಂದು.
ದೇಶದ ಸಂವಿಧಾನ, ರಾಷ್ಟ್ರಧ್ವಜ, ಮೂಲಭೂತ ಹಕ್ಕುನ್ನು ನಾವು ಮರೆಯಬಾರದು. ದೇಶದ ಐಕ್ಯತೆ, ಭಾತೃತ್ವ, ಸಮಗ್ರತೆಗೆ ಧಕ್ಕೆಯಾಗಿದೆ ಎಂದು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ ನಿಮ್ಮ ಪರವಾಗಿ ರಾಹುಲ್ ಗಾಂಧಿ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ.
ರಾಹುಲ್ ಗಾಂಧಿ ಅವರು ರಾಜ್ಯದಲ್ಲೂ ಹೆಜ್ಜೆ ಹಾಕಿ ನಮ್ಮೆಲ್ಲರಿಗೂ ಶಕ್ತಿ ತುಂಬಿದ್ದಾರೆ. ಸೋನಿಯಾ ಗಾಂಧಿ ಅವರು ಕೂಡ ಮೈಸೂರಿಗೆ ಬಂದು ಮೂರು ದಿನಗಳ ಕಾಲ ವಾಸ್ತವ್ಯ ಹೂಡಿ ನಮಗೆ ಬೆಂಬಲ ನೀಡಿದ್ದಾರೆ.
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಭಾರತ ಜೋಡೋ ಯಾತ್ರೆಯಲ್ಲಿ ಭ್ರಾತೃತ್ವ, ಕೋಮು ಸೌಹಾರ್ದತೆ ಪರ, ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಅಸಮಾನತೆ ವಿರುದ್ಧ ಹೋರಾಡುವ ಸಂದೇಶಗಳನ್ನು ನೀಡಿದ್ದಾರೆ. ಈ ಸಂದೇಶಗಳನ್ನು ರಾಜ್ಯದ ಮೂಲೆ, ಮೂಲೆಗೆ ತಲುಪಿಸಲು ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಐಕ್ಯತೆ, ಸಮಗ್ರತೆ, ಶಾಂತಿಯ ಮರುಸ್ಥಾಪನೆ ಮಾಡಬೇಕು.
ವಿಶ್ವದ ಅನೇಕ ರಾಷ್ಟ್ರಗಳು ನಮ್ಮ ಸಿದ್ಧಾಂತ, ಸಂವಿಧಾನದಿಂದ ಪ್ರೇರಣೆ ಪಡೆದಿವೆ. ಹೀಗಾಗಿ ನಮ್ಮ ಸಂವಿಧಾನ ಪ್ರಪಂಚದ ಶ್ರೇಷ್ಠ ಸಂವಿಧಾನವಾಗಿದೆ. ಅದರ ವಿರುದ್ಧ ಸಂಚು ನಡೆಸುತ್ತಿರುವ ಕೋಮುಶಕ್ತಿಗಳನ್ನು ದೂರವಿಡುವುದು ನಮ್ಮ, ನಿಮ್ಮೆಲ್ಲರ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಾಸಕ ತನ್ವಿರ್ ಸೇಠ್, ಮಾಜಿ ಶಾಸಕರಾದ ಸೋಮಶೇಖರ್, ವಾಸು, ಧರ್ಮಸೇನ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ವಕ್ತಾರ ಲಕ್ಷ್ಮಣ್, ಡಿಸಿಸಿ ಅಧ್ಯಕ್ಷರಾದ ಆರ್ ಮೂರ್ತಿ, ವಿಜಯಕುಮಾರ್, ಸೇವಾದಳ ರಾಜ್ಯಾಧ್ಯಕ್ಷ ರಾಮಚಂದ್ರ ಮತ್ತಿತರರು ಭಾಗವಹಿಸಿದ್ದರು.