ಮೈಸೂರು: ಆಲೂರು ವೆಂಕಟರಾಯರು ಹಸಿರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂದು ಕೂಗಿ ಹೇಳಿದ್ದರು. ಆದರೆ ಈಗ ಕರ್ನಾಟಕವೆಂಬ ಹೆಸರಾಗಿದೆ -ಆದರೆ ಕನ್ನಡ ಇನ್ನೂ ಹಸಿರಾಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಹೇಳಿದರು.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ 143ನೇ ಜಯಂತಿ ಅಂಗವಾಗಿ ಎಂ.ಜಿ. ರಸ್ತೆಯಲ್ಲಿರುವ ನ್ಯಾಯಾಲಯದ ಮುಂಭಾಗ ಮನುವನ ಉದ್ಯಾನವನದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಲೂರು ವೆಂಕಟರಾಯರ ಒಂದು -ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಸ್ವಾತಂತ್ರ್ಯ ಪೂರ್ವದಲ್ಲೇ ಆಲೂರು ವೆಂಕಟರಾಯರು ತಮ್ಮನ್ನು ಸಮರ್ಪಿಸಿಕೊಂಡರು ಎಂದು ಹೇಳಿದರು.
ಉಸಿರಾಗದ ಹೊರತು ಕನ್ನಡ ಸಂಸ್ಕೃತಿಗೆ ಉಳಿಗಾಲವಿಲ್ಲ ಎಂದು ಮನಗೊಂಡಿದ್ದ ಆಲೂರರು ಬದುಕಿನ ಉದ್ದಕ್ಕೂ ಕನ್ನಡಕ್ಕಾಗಿ ಕನವರಿಸಿದರು. 1907 ರಲ್ಲೇ ಕನ್ನಡ ಗ್ರಂಥ ಕರ್ತರ ಸಮ್ಮೇಳನ ವನ್ನು ಆಯೋಜಿಸಿದ್ದರು. ಕನ್ನಡಿಗರು ಹೈದರಾಬಾದ್ ಬಾಂಬೆ ಮದ್ರಾಸ್ ಮೈಸೂರು ಪ್ರಾಂತ್ಯದಲ್ಲಿ ಹಂಚಿ ಹೋಗಿದ್ದಾಗ ಆ ಎಲ್ಲ ಕನ್ನಡಿಗರು ಕರ್ನಾಟಕದ ಹೆಸರಿನಲ್ಲಿ ಐಕ್ಯವಾಗಬೇಕು. ಕನ್ನಡಿಗರಿಗೊಂದು ಅಸ್ಮಿತೆ ಇರಬೇಕು ಎಂದು ಹಂಬಲಿಸಿದವರು. ಅವರ ಬದುಕಿನ ಗುರಿ ಕರ್ನಾಟಕದ ಏಕೀಕರಣ ಆ ಮೂಲಕ ವಿಶಾಲ ಕರ್ನಾಟಕ ರಾಜ್ಯದ ಅಸ್ತಿತ್ವ ಆಗಬೇಕು ಎಂಬುದಾಗಿತ್ತು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರಾದ ಚಂದ್ರಶೇಖರ್ ಮಾತನಾಡಿ ಕನ್ನಡದ ಆಲೂರರು ಮಹಾನ್ ಚೇತನ, ಕನ್ನಡ ಕನ್ನಡಿಗ ಕರ್ನಾಟಕ ಇರುವತನಕ ಮರೆಯದ, ಮರೆಯಲಾಗದ ವ್ಯಕ್ತಿತ್ವ, 25ಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದ ಆಲೂರು ವೆಂಕಟರಾಯರು ಬಾಲಗಂಗಾಧರ ತಿಲಕರ ಗೀತಾ ರಹಸ್ಯವನ್ನ ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯಕ್ಕೆ ಘನತೆ ಗೌರವ ತಂದುಕೊಟ್ಟರು ಎಂದರು.
ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್ ಕುಮಾರ್, ನಗರ ಪಾಲಿಕಾ ಸದಸ್ಯರಾದ ಸೌಮ್ಯಾ ಉಮೇಶ್, ಜಗದೀಶ್, ವಕೀಲರ ಸಂಘದ ಕಾರ್ಯದರ್ಶಿ ಉಮೇಶ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಪೂರ್ವ ಸುರೇಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಶಿವರಾಜ್, ರಾಕೇಶ್ ಕುಂಚಿಟಿಗ, ಸುಚೀಂದ್ರ, ಚೇತನ್ ಕಾಂತರಾಜು, ರಂಗನಾಥ್, ಚಕ್ರಪಾಣಿ, ಪುರುಷೋತ್ತಮ್, ಶಿವಕುಮಾರ್, ಜೀವನ್ ಇನ್ನಿತರರು ಹಾಜರಿದ್ದರು.