ಹುಣಸೂರು : ಗಣಿತ ಬಹಳ ಕಷ್ಟವೆಂಬ ಮನೋಭಾವ ಬಹುತೇಕ ವಿದ್ಯಾರ್ಥಿಗಳಲ್ಲಿದೆ. ಗಣಿತದ ಬಗ್ಗೆ ಇಂಥ ಭಾವನೆಯನ್ನು ಮನಸ್ಸಿನಿಂದ ತೆಗೆದು ಹಾಕಿ ವಿದ್ಯಾರ್ಥಿಗಳು ಇಷ್ಟಪಟ್ಟು ಗಣಿತವನ್ನು ಕಲಿತರೆ ಅದರಷ್ಟು ಸುಲಭ ಮತ್ತೊಂದು ವಿಷಯ ಇಲ್ಲವೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ತಾಲೂಕಿನ ಮನುಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲೆಯ ಪ್ರತಿಷ್ಠಿತ ಸೇವಾ ಸಂಸ್ಥೆಗಳಾದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ‘ಪೈ’ ದಿನಾಚರಣೆ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ಪೈ’ ಪ್ರಮೇಯವು ಗಣಿತದ ಜೀವನಾಡಿ. ಇದು ಗ್ರೀಕ್ ನಿಂದ ಬಂದ ಪದ.’ಪೈ’ ಸೂತ್ರವನ್ನು ಅರ್ಥ ಮಾಡಿಕೊಂಡು ಅರಗಿಸಿಕೊಳ್ಳಬೇಕೆಂದರೆ ಗಣಿತದ ಮೂಲಭೂತ ವಿಷಯಗಳನ್ನು ಚೆನ್ನಾಗಿ ಓದಿಕೊಂಡು ತಿಳಿದುಕೊಂಡಿರಬೇಕೆಂದರು.
ಖ್ಯಾತ ಸಂಖ್ಯಾಶಾಸ್ತ್ರಜ್ಞ ಎಸ್. ಜಿ.ಸೀತಾರಾಮ್ ಅವರು ಮಾತನಾಡಿ ವಿಶ್ವ ‘ಪೈ’ ದಿನಾಚರಣೆಯ ಹಿನ್ನೆಲೆಯಲ್ಲಿ ಅದರ ಸಂಪೂರ್ಣ ಕಥನವನ್ನು, ಮಹತ್ವವನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥ ಆಗುವಂತೆ ಅತ್ಯಂತ ಸರಳವಾಗಿ ಸವಿವರವಾಗಿ ತಿಳಿಸಿಕೊಟ್ಟರು. ಶಿಕ್ಷಣ ಪರ ಚಿಂತಕರಾದ ವಿಶ್ರಾಂತ ಇಂಜಿನಿಯರ್ ಮನುಗನಹಳ್ಳಿ ಎಸ್. ಗೋವಿಂದೇಗೌಡ ಹಾಗೂ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷರೂ ಆದ ಶಿಕ್ಷಣ ತಜ್ಞ ಎ.ಸಂಗಪ್ಪ ಅವರು ಪ್ರಸ್ತುತ ವರ್ಷದ ಎಸ್ಎಸ್ಎಲ್ ಸಿ ಯ ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿ ಶುಭ ಹಾರೈಸಿದರು. ಖ್ಯಾತ ಲೇಖಕಿ ಹಾಗೂ ಚಿತ್ರಕಲಾವಿದೆ ಡಾ.ಜಮುನಾರಾಣಿ ಮಿರ್ಲೆ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯೆಂಬುದು ನಿರಂತರವಾಗಿರಬೇಕು. ಯುದ್ಧಕಾಲೇಶಸ್ತ್ರಾಭ್ಯಾಸ ಎನ್ನುವಂತಾಗಬಾರದು. ಓದಿನ ಜೊತೆಗೆ ಪರಿಶ್ರಮ, ಪರಿಶ್ರಮದ ಜೊತೆಗೆ ಯಾವುದಕ್ಕೂ ಅಂಜದ,ಅಳುಕದ ಆತ್ಮವಿಶ್ವಾಸ ಇರಬೇಕು. ಆಗ ಪರೀಕ್ಷೆಯನ್ನು ಎದುರಿಸುವುದು ಸುಲಭವಾಗುತ್ತದೆ. ಹಾಗೆಯೇ ಯಶಸ್ಸು ನಿಮ್ಮದಾಗುತ್ತದೆಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದ ಅವರು, ಎಲ್ಲಾ ದೃಷ್ಟಿಯಿಂದಲೂ ನಿಮ್ಮ ಶಾಲೆ ಜಿಲ್ಲೆಯ ಅತ್ಯುತ್ತಮ ಸರ್ಕಾರಿ ಪ್ರೌಢಶಾಲೆಗಳಲ್ಲೊಂದಾಗಿದ್ದು ಇದರ ಕೀರ್ತಿ ನಿಮ್ಮ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಅವರಿಗೆ ಹಾಗೂ ಎಲ್ಲಾ ಸಹಶಿಕ್ಷಕಿಯರಿಗೆ ಸಲ್ಲುತ್ತದೆಂದು ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಮನುಗನಹಳ್ಳಿ ಯಂತಹ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಪ್ರೌಢಶಾಲೆಯನ್ನು ಜಿಲ್ಲೆಯಲ್ಲೇ ಒಂದು ಮಾದರಿ ಶಾಲೆಯನ್ನಾಗಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಾ ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಹಾಗೂ ಹುಣಸೂರು ರತ್ನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಗಳಿಸಿ ಜನ ಮೆಚ್ಚುಗೆ ಪಡೆದಿರುವ ಮುಖ್ಯ ಶಿಕ್ಷಕಿ ಸಿ.ಎನ್.ಗೀತಾ ಅವರನ್ನು ಮತ್ತು ಪ್ರಸ್ತುತ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ಸಾಹಿತಿ ಬನ್ನೂರು ರಾಜು ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಸಿ.ಎನ್. ಗೀತಾ ಅವರು ಅಧ್ಯಕ್ಷತೆ ವಹಿಸಿದ್ದರು. ಕಾವೇರಿ ಬಳಗದ ಅಧ್ಯಕ್ಷೆಯೂ ಆದ ವಿಶ್ರಾಂತ ಶಿಕ್ಷಕಿ ಎನ್.ಕೆ.ಕಾವೇರಿಯಮ್ಮ, ಶಿಕ್ಷಕಿಯರಾದ ಹೆಚ್.ಶಶಿಕಲಾ, ಎಂ.ಜಿ.ಪುಷ್ಪ, ಸಿ.ಎಸ್. ರಮ್ಯಾ, ಎಸ್. ಎಸ್. ಚಂದ್ರಕಲಾ, ಸೌಮ್ಯ ಅರವಿಂದನಾಯಕ್, ಜೆ.ವಸಂತಕುಮಾರಿ, ಚೇತನಾ, ಹೆಚ್.ಸಿ.ಪಲ್ಲವಿ ಉಪಸ್ಥಿತರಿದ್ದರು.ಕಾರ್ಯಕ್ರದ ಪ್ರಾರಂಭದಲ್ಲಿ ಶಿಕ್ಷಕಿ ವಸಂತಕುಮಾರಿ ಎಲ್ಲರನ್ನೂ ಸ್ವಾಗತಿಸಿದರು. ಗಣಿತ ಶಿಕ್ಷಕಿ ರಮ್ಯಾ ವಂದಿಸಿದರು. ವಿಜ್ಞಾನ ಶಿಕ್ಷಕಿ ಶಶಿಕಲಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.