ಮೈಸೂರು: ಸಂಸದ ಪ್ರತಾಪ್ಸಿಂಹ ಅವರ ಬಗ್ಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ನಾಥ್ ಕೀಳಾಗಿ ಮಾತನಾಡಿರುವುದು ಖಂಡನೀಯ. ಹೀಗಾಗಿ ಅವರು ಕೂಡಲೇ ಕ್ಷಮೆ ಯಾಚಿಸದಿದ್ದಲ್ಲಿ ಹೋರಾಟ ನಡೆಸಲಾಗುವುದೆಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಹೇಮಾನಂದೀಶ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸದರಿಗೂ ವೃತ್ತಿ ಜೀವನದ ಜತೆಗೆ ವೈಯಕ್ತಿಕ ಜೀವನವೂ ಇರುತ್ತದೆ. ಹೀಗಾಗಿ ಅವರ ವಿರುದ್ಧ ಪಬ್ ಸಂಸ್ಕೃತಿಯವರು ಎಂದು ಆರೋಪಿಸಿರುವುದು ಸುಳ್ಳು. ಇನ್ನು, ಬಿಜೆಪಿ ಮಹಿಳೆಯರಿಗೆ ಪಾಲಿಕೆಯಲ್ಲಿ ಪ್ರಾಧಾನ್ಯತೆ ನೀಡಿದೆ. ಈ ಹಿಂದೆ ಉಪ ಮೇಯರ್ ಸ್ಥಾನಕ್ಕೆ ರತ್ನ ಲಕ್ಷ್ಮಣ್, ಮಹದೇವಮ್ಮ, ಅದೇ ರೀತಿ ಮೇಯರ್ ಆಗಿ ಸುನಂದಾ ಪಾಲನೇತ್ರ ಅವರಿಗೆ ಅವಕಾಶ ನೀಡಿತ್ತು ಎಂದರು.
ಪುಷ್ಪ ಅಮರ್ನಾಥ್ ಅವರು ಜಿಪಂ ಅಧ್ಯಕ್ಷರಾಗಿ ಯಾವುದೇ ಸಾಧನೆ ಮಾಡಿಲ್ಲ. ಆದರೂ ಏಕಾಏಕಿ ಕೆಪಿಸಿಸಿ ಮಹಿಳಾ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ತಮ್ಮ ರಾಜಕೀಯ ತೆವಲಿಗಾಗಿ ಹಾಗೂ ಸಿದ್ದರಾಮಯ್ಯ ಅವರನ್ನು ಓಲೈಸುವ ಸಲುವಾಗಿ ಸಂಸದರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಚ್.ಪಿ.ಮಂಜುನಾಥ್ ಅವರಿಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡುವುದು ಅನುಮಾನವಾಗಿದೆ. ಹೀಗಾಗಿ ಪುಷ್ಪ ಅಮರ್ನಾಥ್ ಅವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆಂದರು. ಪದಾಧಿಕಾರಿಗಳಾದ ಸರಸ್ವತಿ, ಆಶಾ ಲಕ್ಷ್ಮಿನಾರಾಯಣ್, ಪದ್ಮಶ್ರೀ, ಪ್ರಮೋದಿನಿ, ಧನಲಕ್ಷ್ಮಿ ಹಾಜರಿದ್ದರು.