ಮೈಸೂರು: ರಾಜ್ಯದ ಅಭಿವೃದ್ಧಿಗೆ ಹಾಸನ ಜಿಲ್ಲೆ ತನ್ನದೇ ಆದ ಪಾತ್ರ ವಹಿಸಿದ್ದು, ಮೈಸೂರು ಅಭಿವೃದ್ಧಿಯಲ್ಲೂ ಹಾಸನ ಜಿಲ್ಲೆಯವರ ಪಾತ್ರ ಇರಲಿ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.
ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಹಾಸನ ಜಿಲ್ಲಾ ಬಳಗ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸರ್ವಸದಸ್ಯರ ಸಭೆಯಲ್ಲಿ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಹಾಸನ ಜಿಲ್ಲೆಯು ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ದೊಡ್ಡ ಇತಿಹಾಸ ಹೊಂದಿದೆ. ಮೌರ್ಯರು ಹಾಸನವನ್ನು ಕೇಂದ್ರವಾಗಿಸಿಕೊಂಡು ಆಳ್ವಿಕೆ ನಡೆಸಿದ್ದರು. ಅಶೋಕ ಚಕ್ರವರ್ತಿ ಸಹ ಶ್ರವಣಬೆಳಗೊಳವನ್ನು ಕೇಂದ್ರವಾಗಿರಿಸಿಕೊಂಡಿದ್ದರು. ಇದರಿಂದಾಗಿಯೇ ಹಾಸನದವರನ್ನು ಬಹಳ ಜೋರು ಮಾಡುವವರು ಹಾಗೂ ಶಾಂತಮೂರ್ತಿಗಳು ಅಂತ ಹೇಳಲಾಗುತ್ತದೆ ಎಂದು ಅವರು ತಿಳಿಸಿದರು.
ಹಾಸನ ಧಾರ್ಮಿಕ ಕ್ಷೇತ್ರವಾಗಿ, ಶಿಕ್ಷಣ, ವಿeನ ಕ್ಷೇತ್ರಕ್ಕೆ ಹಲವು ಕೊಡುಗೆ ನೀಡಿದೆ. ರಾಜಕೀಯ ಕ್ಷೇತ್ರದಲ್ಲಿ ದಕ್ಷಿಣ ಭಾರತದಿಂದ ಅದರಲ್ಲೂ ಕನ್ನಡಿಗರಾದ ಎಚ್.ಡಿ. ದೇವೇಗೌಡರು ಪ್ರಧಾನಿಯಾದರು. ಅವರು ಸಹ ಹಾಸನ ಜಿಲ್ಲೆಯವರು ಎಂಬುದೇ ಹೆಮ್ಮೆ ಎಂದು ಅವರು ಹೇಳಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯಕ್ಕಷ್ಟೇ ಅಲ್ಲದೇ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಎಚ್.ಡಿ. ದೇವೇಗೌಡರು ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಹಲವಾರು ಕೊಡುಗೆ ನೀಡಿದ್ದಾರೆ.
ಗ್ರಾ.ಪಂ, ತಾ.ಪಂ, ಜಿ.ಪಂ.ಗೆ ಮೀಸಲಾತಿ ಕೊಟ್ಟಿದ್ದು, ಹೆದ್ದಾರಿಗಳು ಬೆಂಗಳೂರಿನ ಮೆಟ್ರೋರೈಲು ನೀರಾವರಿ ಯೋಜನೆ, ಸಾಲಮನ್ನಾ ಯೋಜನೆಯನ್ನು ನೀಡಿದರು. ಪಂಜಾಬಿನಲ್ಲಿ ದೇವೇಗೌಡರ ಹೆಸರನ್ನು ಭತ್ತದ ತಳಿಗೆ ಇಟ್ಟಿದ್ದಾರೆ. ರಾಗಿಮುದ್ದೆಯನ್ನು ದೇಶಕ್ಕೆ ಪರಿಚಯಿಸಿದ್ದಾರೆ. ಮೈಸೂರಿನ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ದೇವೇಗೌಡರು ಒಕ್ಕಲಿಗ ಸಮಾಜಕ್ಕೆ ಶಕ್ತಿ ತುಂಬಿದ್ದಾರೆ.
ಇದಲ್ಲದೆ ಎಚ್.ಸಿ. ಶ್ರೀಕಂಠಯ್ಯರವರು, ಪುಟ್ಟಸ್ವಾಮಿಗೌಡರು. ಸಹ ಒಕ್ಕಲಿಗ ಸಮಾಜಕ್ಕೆ ಕೆಲಸ ಮಾಡಿದ್ದಾರೆ. ಒಕ್ಕಲಿಗ ಸಮಾಜದ ನಾಯಕರಾದ ಎಚ್.ಡಿ. ದೇವೇಗೌಡರು ಎಸ್.ಎಂ.ಕೃಷ್ಣರವರು ಸದಾನಂದಗೌಡರು, ಕುಮಾರಸ್ವಾಮಿಯವರು ಯಾವುದೇ ಕಪ್ಪುಚುಕ್ಕೆ ಇಲ್ಲದೆ ಅಧಿಕಾರ ನಡೆಸಿದ್ದಾರೆ. ಅಧಿಕಾರ, ಐಶ್ವರ್ಯ ಯಾವುದೂ ಶಾಶ್ವತವಲ್ಲ. ಜಾತಿ ಹಿಂದೆ ಹೋದವರು ಯಾರು ಬೆಳೆದಿಲ್ಲ ಆದ್ದರಿಂದ ಎಲ್ಲಾ ಸಮಾಜದವರನ್ನು ಪ್ರೀತಿಸಿದಾಗ ಮಾತ್ರ ಬೆಳೆಯಲು ಸಾಧ ಎಂದ ಅವರು, ಮೂಡಾದಿಂದ ಸಿ.ಎ.ನಿವೇಶನ ಮಾಡಿಸಿಕೊಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಗಂಗಾಧರ್, ಸದಸ್ಯ ಎಂ.ಬಿ. ಮಂಜೇಗೌಡ, ಉದ್ಯಮಿ ಬಾಲಾಜಿ ಶೇಖರ್, ಹಾಸನ ಜಿಲ್ಲಾ ಬಳಗದ ಅಧ್ಯಕ್ಷೆ ಪಿ. ಶಾರದಮ್ಮ, ಗೌರವಾಧ್ಯಕ್ಷ ಬಿ.ಬಿ. ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಬಿ.ಜಿ. ರಂಗೇಗೌಡ ಹಾಗೂ ಪದಾಧಿಕಾರಿಗಳು ಇದ್ದರು.