ಮೈಸೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಬದಲಾಗುವುದಿಲ್ಲ. ಪ್ರತಿ ತಿಂಗಳು ಮಹಿಳೆಯರಿಗೆ 2ಸಾವಿರ ರೂ. ನೀಡುವುದರಿಂದ ಅಥವಾ ಉಚಿತ ವಿದ್ಯುತ್ ನೀಡುವುದರಿಂದ ಜನರ ಸಂಕಷ್ಟಗಳು ಪರಿಹಾರವಾಗುವುದಿಲ್ಲ ಎಂದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ತಿಳಿಸಿದ್ದಾರೆ.
ನಾರಿ ಶಕ್ತಿ ವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಅಡುಗೆ ಮನೆಯ ಹೊಗೆಯಿಂದ ಮುಕ್ತವಾಗಬೇಕು ಎಂಬ ಉದ್ದೇಶದಿಂದ ಉಜ್ವಲ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದರು. ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಯೋಜನೆಯಡಿ 11 ಕೋಟಿ ಶೌಚಗೃಹ ನಿರ್ಮಿಸಿದೆ ಎಂದರು.
ಕೇಂದ್ರ ಸರ್ಕಾರ ಮಹಿಳೆಯರಿಗೆ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೇ.33 ಮೀಸಲಾತಿ ಕಲ್ಪಿಸಿದ್ದು, ಆ ಮೂಲಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಬರಲು ಅವಕಾಶ ಮಾಡಿಕೊಟ್ಟಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಜನರಿಗೆ ತಲುಪಲು ಕೇಂದ್ರ ಸರ್ಕಾರದ ಜನಧನ ಯೋಜನೆ ಪ್ರಮುಖ ಕಾರಣ. ಒಂದು ವೇಳೆ ಜನಧನ ಖಾತೆ ತೆರೆಯದೆ ಇದ್ದರೆ ಹಲವಾರು ಮಹಿಳೆಯರಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಮುದ್ರಾ, ಸ್ವನಿಧಿ, ವಿಶ್ವಕರ್ಮ ಯೋಜನೆ ಮೂಲಕ ಸಣ್ಣಪುಟ್ಟ ವರ್ತಕರಿಗೆ 10 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಈ ಸಾಲಕ್ಕೆ ಮೋದಿಯೇ ಗ್ಯಾರಂಟಿ. ಈ ಯೋಜನೆಯಡಿ ಹಲವಾರು ವರ್ತಕರು ಸಾಲ ಪಡೆದು ವ್ಯಾಪಾರ-ವಹಿವಾಟು ಪ್ರಾರಂಭಿಸಿ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದಾರೆ ಎಂದರು.
ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡ ಶೇಖ್ ಶಹಜಹಾನ್ ನಿರಂತರವಾಗಿ 10 ವರ್ಷಗಳಿಂದ ಹಿಂದು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರೂ ಪಶ್ಚಿಮ ಬಂಗಾಳ ಸರ್ಕಾರ ಆರೋಪಿಯ ಬೆಂಬಲಕ್ಕೆ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.