ಮೈಸೂರು: ಯಾವುದೇ ಸಮಾಜದ ಹೆಣ್ಣು ಮಕ್ಕಳಿಗೂ ಸಹ ಮೊದಲು ಶಿಕ್ಷಣ ಕೊಡಿಸಬೇಕು. ಜೀವನದಲ್ಲಿ ಶಿಕ್ಷಣ ಬಹು ಮುಖ್ಯವಾದದ್ದು, ವಿದ್ಯಾಭ್ಯಾಸ ಪಡೆಯುವುದು ಎಲ್ಲರ ಹಕ್ಕು ಎಲ್ಲರೂ ಸಹ ಶಿಕ್ಷಣ ಪಡೆಯಬೇಕು. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಮಹಾನಗರ ಪಾಲಿಕೆಯ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸವಿತಾ ಸಮಾಜದ ಮೂಲ ಪುರುಷ ಸವಿತಾ ಮಹರ್ಷಿ. ಶಿವನ ಬಲಗಣ್ಣಿನಿಂದ ಜನಿಸಿದ ಸವಿತಾ ಮಹರ್ಷಿಯವರು ದೈವ ಲೋಕದಿಂದ ಉದಯಿಸಿದ ಮಹಾಪುರುಷರ ಸಂತತಿ ಇವರದಾಗಿದೆ. ಸೂರ್ಯನಿಂದ ಉದಯವಾದವನು ಸವಿತಾ ಹಾಗಾಗಿ ಸವಿತಾ ಮಹರ್ಷಿ ಎಂಬ ಹೆಸರು ಬಂದಿದೆ ಎಂದರು.
ಮುಖ್ಯ ಭಾಷಣಕಾರರಾಗಿ, ಲೇಖಕ ಹಾಗೂ ಅಂಕಣಕಾರ ಮೈನಾ ಲೋಕೇಶ್ ಮಾತನಾಡಿ, ಮಹನೀಯರ ತತ್ವಗಳನ್ನು ನಾವು ಆಚರಿಸುವ ಮೂಲ ಉದ್ದೇಶ, ಅವರ ತತ್ವ ಆದರ್ಶಗಳನ್ನು ಪರಿಪಾಲಿಸಬೇಕು ಎಂಬುವುದಾದರೆ ಮತ್ತೊಂದು ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ತೊರೆದು ಸಮಾಜವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಮಾಡಿಕೊಟ್ಟಿರುವಂತಹ ಅವಕಾಶ ಇದಾಗಿದೆ. ಅದನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಆಡು ಮುಟ್ಟದ ಸೊಪ್ಪಿಲ್ಲ, ಕ್ಷೌರಿಕ ಬಂದು ಮುಟ್ಟದ ಜನರಿಲ್ಲ ಎನ್ನುತ್ತಾ ಸಮಾಜದ ಜನರ ಕೇಶ ಸೌಂದರ್ಯವನ್ನು ವೃದ್ಧಿಸುವ ಕಾಯಕವನ್ನು ಸವಿತಾ ಸಮಾಜ ಮಾಡುತ್ತಿದೆ. ನಮ್ಮ ಸಮಾಜವಿಲ್ಲದೆ ಯಾವುದೇ ಶುಭ ಸಮಾರಂಭಗಳು, ಸಾವು ಸೂತಕಗಳು ನಡೆಯುವುದಿಲ್ಲ ಎಂದರು.
ಸವಿತಾ ಮಹರ್ಷಿಯವರು ಸೂರ್ಯ ವಂಶದವರು. ನಾಟಿ ವೈದ್ಯ, ಡೋಲು ಬಾರಿಸುವ ಕಲೆ ಹಾಗೂ ಲಲಿತಾ ಕಲೆಗಳಲ್ಲಿ ಸವಿತಾ ಸಮಾಜದ ಹೆಸರು ಇನ್ನೂ ಉಳಿದಿದೆ. ಗಾಯತ್ರೀ, ಹಡಪದ ಅಪ್ಪಣ್ಣ, ಇಮ್ಮಡಿ ಬಿಜ್ಜಳ, ಗೌತಮ ಬುದ್ಧನ ಅನುಯಾಯಿಯಾದ ಆಚಾರ್ಯ ಉಪಾಲೀ ಇನ್ನೂ ಮುಂತಾದವರು ಸವಿತಾ ಸಮಾಜದ ಮುಖ್ಯ ದಿಗ್ಗಜರುಗಳಾಗಿದ್ದಾರೆ. ಸವಿತಾ ಸಮಾಜವನ್ನು ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಧೃಢವಾಗಿ ಮುಂದುವರೆಯಲು ಸರ್ಕಾರವು ಮೀಸಲಾತಿಯನ್ನು ಬಲಪಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿಸುದರ್ಶನ್, ಹಾಗೂ ಸಮುದಾಯದ ಮುಖಂಡರು ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.