ಮೈಸೂರು: ವಸತಿ ಇಲಾಖೆ, ರಾಜೀವ್ ಗಾಂಧಿ ವಸತಿ ನಿಗಮ, ಜಿಲ್ಲಾಡಳಿತ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 1440 ಗುಂಪು ಮನೆಗಳ ನಿರ್ಮಾಣಕ್ಕೆ ವಸತಿ ಸಚಿವ ಜಮೀರ್ ಅಹಮದ್ಖಾನ್ ಭೂಮಿ ಪೂಜೆ, ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಬಡವರ ಬಗ್ಗೆ ಹೆಚ್ಚು ಕಾಳಜಿ ಇರುವುದರಿಂದ ಪ್ರತಿ ಮನೆಗೆ 5 ಲಕ್ಷ ಸಬ್ಸಿಡಿ ನೀಡಿ 8500 ಕೋಟಿ ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ ಎಂದರಲ್ಲದೆ, ವರುಣಾ ಕ್ಷೇತ್ರದ ಲಲಿತಾದ್ರಿಪುರದಲ್ಲಿ ಅವರು, ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರಿಗೆ ಏಕೆ ಬಡವರ ಬಗ್ಗೆ ಕಾಳಜಿ ಇರಲಿಲ್ಲ. ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವ ಮುಖ್ಯಮಂತ್ರಿ ಬಡವರ ಪರ ಇರುವ ಮುಖ್ಯಮಂತ್ರಿ ಆಗಿದ್ದರಿಂದಲೇ 9 ತಿಂಗಳಲ್ಲಿಯೇ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ನಮ್ಮ ಸರ್ಕಾರವಿದ್ದಾಗ 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ಬಡವರಿಗಾಗಿ ಕಟ್ಟಿದ್ದೇವೆ. ಈಗ ಕೃಷ್ಣರಾಜ ಕ್ಷೇತ್ರದ ಫಲಾನುಭವಿಗಳಿಗೆ 940 ಮನೆ ವರುಣಾ ಕ್ಷೇತ್ರದ ಫಲಾನುಭವಿಗಳಿಗೆ 500 ಮನೆಗಳನ್ನು ಕಟ್ಟಿಕೊಡಲಾಗುವುದು ನಮ್ಮ ಸರ್ಕಾರ ಬಂದ ಮೇಲೆ ವರುಣಾ ಕ್ಷೇತ್ರಕ್ಕೆ ವಸತಿ ಸಚಿವರು 3 ಸಾವಿರ ಮನೆ ಮಂಜೂರು ಮಾಡಿಕೊಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಡವರ ಪರ, ರೈತರ ಪರ, ದೀನ ದಲಿತರ ಪರವಿರುವ ಸರ್ಕಾರವಾಗಿದೆ. ದೇಶದಲ್ಲಿ ಬಡವರು ಬಡವರಾಗಿಯೇ ಇದ್ದಾರೆ. ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ. ಶೇ.1ರಷ್ಟು ಜನರಲ್ಲಿ ಶೇ.50 ಸಂಪತ್ತು ಸೇರಿಕೊಂಡಿದೆ. ಇದರಿಂದ ದೇಶದಲ್ಲಿ ಸಮಾನತೆ ಬರಲು ಸಾಧ್ಯವಿಲ್ಲ ಎಂದ ಅವರು, ದೇವಸ್ಥಾನ ದೇವರ ಹೆಸರಲ್ಲಿ ಓಟು ಕೇಳುವವರನ್ನು ದೂರವಿಟ್ಟು ನಿಮ್ಮ ಪರವಾಗಿ ಕೆಲಸ ಮಾಡುವವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಮುಡಾ ಅಧ್ಯಕ್ಷ ಕೆ.ಮರೀಗೌಡ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮುಖಂಡರಾದ ಮಂಜುಳಾ ಮಂಜುನಾಥ್, ರಮೇಶ್ ಮುದ್ದೇಗೌಡ, ಸಕ್ಕಳ್ಳಿ ಬಸರಾಜು, ಉತ್ತನಹಳ್ಳಿ ಶಿವಣ್ಣ, ನಗರಪಾಲಿಕೆ ಆಯುಕ್ತೆ ಡಾ.ಎಂ.ಎನ್.ಮಧು, ಉಪ ಆಯುಕ್ತೆ ಕುಸುಮಾ ಕುಮಾರಿ, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ವಿಜಯ್, ಆಪ್ತ ಸಹಾಯಕ ಶಿವಸ್ವಾಮಿ, ಪ್ರದೀಪ್ ಕುಮಾರ್, ನಾಗರಾಜು ಇದ್ದರು.