ಮೈಸೂರು: ಕಾಂಗ್ರೆಸ್ ಶ್ರೀ ರಾಮಚಂದ್ರನ ಪೇಟೆಂಟ್ನ್ನು ಬಿಜೆಪಿಗೆ ಕೊಟ್ಟಿದ್ದು ಕಾಂಗ್ರೆಸ್ಸಿಗರೇ ಶ್ರೀರಾಮಚಂದ್ರನನ್ನು ಪೂಜೆ ಮಾಡಿದ್ದರೆ ಬಿಜೆಪಿಗೆ ಏಕೆ ಪೇಟೆಂಟ್ ಸಿಗುತ್ತಿತ್ತು ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಮನ ಅಸ್ತಿತ್ವವನ್ನೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದ ಕಾಂಗ್ರೆಸ್ ಗೆ ಶ್ರೀರಾಮ ಏನು ಬಿಜೆಪಿ ಪೇಟೆಂಟಾ ಎಂದು ಕೇಳುವ ನೈತಿಕತೆ ಇಲ್ಲ. ಕಾಂಗ್ರೆಸ್ ನಾಯಕರಿಗೆ ರಾಮರಾಜ್ಯದ ಮೇಲೆ ನಂಬಿಕೆ ಇದೆಯೇ? ಇಲ್ಲ ರಾವಣ ರಾಜ್ಯದ ಮೇಲೆ ನಂಬಿಕೆ ಇದೆಯೇ? ಕಾಂಗ್ರೆಸ್ಗೆ ಗಾಂಧೀಜಿಯ ರಾಮರಾಜ್ಯದ ನಂಬಿಕೆ ಇಲ್ಲ ಎಂದು ಕಿಡಿಕಾರಿದರು. ಅಯೋಧ್ಯೆ ಮಂತ್ರಾಕ್ಷತೆಗೆ ಅನ್ನಭಾಗ್ಯ ಅಕ್ಕಿ ಬಳಸಿದ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಮಂತ್ರಾಕ್ಷತೆ ಸ್ವೀಕರಿಸಲು ಆಗದ ಕೈಗಳಿಗೆ ಅಕ್ಕಿ ಕೊಡಲು ಮನಸ್ಸು ಬರುತ್ತಾ? ಅಕ್ಷತೆ, ಗೋಮೂತ್ರದ ಮೇಲೆ ಕಾಂಗ್ರೆಸ್ಗೆ, ಸಿದ್ದರಾಮಯ್ಯರಿಗೆ ನಂಬಿಕೆ ಇಲ್ಲ. ಅಯೋಧ್ಯೆಗೆ ಹೋಗುವುದು, ಬಿಡುವುದು ಸಿದ್ದರಾಮಯ್ಯರಿಗೆ ಬಿಟ್ಟ ವಿಚಾರ ಎಂದರು.
ಮಂತ್ರ, ಗೋತ್ರ, ಅಕ್ಷತೆ ಬಗ್ಗೆ ನಂಬಿಕೆ ಇರದ ಸಿಎಂ ಮಂತ್ರಾಕ್ಷತೆಗಾಗಿ ಅಕ್ಕಿ ಕೊಡುತ್ತಾರಾ? ಜನಕ್ಕೆ ಸಿಗುತ್ತಿರುವ ಅಕ್ಕಿ ಪಿಎಂ ಮೋದಿ ಅವರ ಅನ್ನ ಕಲ್ಯಾಣ ಯೋಜನೆಯ ಅಕ್ಕಿ. ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಯಾವುದೇ ಅಕ್ಕಿ ನೀಡುತ್ತಿಲ್ಲ. ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರು ಪೇಚಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ. ಎಲ್ಲದಕ್ಕೂ ಕೈ ಚಾಚುವ ದಯನೀಯ ಸ್ಥಿತಿ ಕಾಂಗ್ರೆಸ್ಗೆ ಬಂದಿದೆ ಎಂದು ಟೀಕಿಸಿದರು.
ನಾನು ಸಾಮಾನ್ಯ ಬಡ ಕುಟುಂಬದಿಂದ ಬಂದವನು. ಖಂಡಿತ ರಾಷ್ಟ್ರೀಯ ನಾಯಕನಲ್ಲ. ಅಪ್ಪ ಸಿಎಂ ಆಗಿದ್ದರೆ ತನ್ನ ಲ್ಯಾಬ್ಗೆ ಗುತ್ತಿಗೆ ಪಡೆಯೋರು ರಾಷ್ಟ್ರೀಯ ನಾಯಕ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
ಅಪ್ಪನನ್ನು ವರುಣ ಕ್ಷೇತ್ರದಿಂದ ಬಾದಾಮಿ ಕ್ಷೇತ್ರಕ್ಕೆ ಓಡಿಸುವವರು ರಾಷ್ಟ್ರೀಯ ನಾಯಕ. ತಾನು ಹೇಳಿದ ವರ್ಗಾವಣೆ ಪಟ್ಟಿಗೆ ಸಹಿ ಮಾಡಿ ಎನ್ನುವವರು ರಾಷ್ಟ್ರೀಯ ನಾಯಕ. ಮೈಸೂರು ಭಾಗದ ನಿಜವಾದ ರಾಷ್ಟ್ರೀಯ ನಾಯಕ ಯತೀಂದ್ರ ಹೊರತು ನಾನಲ್ಲ. ವರ್ಗಾವಣೆ ಪತ್ರಕ್ಕೆ ಸಹಿ ಹಾಕು ಅಂತ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಹೇಳುತ್ತಾರೆ. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕುವಷ್ಟು ಯತೀಂದ್ರ ದೊಡ್ಡ ಲೀಡರ್. ಅಪ್ಪನಿಗೆ ಡಿಕ್ಟೇಟ್ ಮಾಡುವಷ್ಟು ಯತೀಂದ್ರ ಬೆಳೆದಿದ್ದಾರೆ ಎಂದು ಕುಟುಕಿದರು.