ಮೈಸೂರು: ಕ್ರೈಸ್ತರ ಪ್ರವಿತ್ರ ಹಬ್ಬ ಕ್ರಿಸ್ಮಸ್ ಸಂಭ್ರಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮನೆ ಮಾಡಿದ್ದು, ಐತಿಹಾಸಿಕ ಸಂತ ಫಿಲೋಲನಾ ಚರ್ಚ್ ಸೇರಿದಂತೆ ನಗರದ ವಿವಿಧೆಡೆ ಇರುವ ಚರ್ಚ್ ಗಳಲ್ಲಿ ಶನಿವಾರ ರಾತ್ರಿ ವಿಶೇಷ ಪೂಜೆಗಳು ನಡೆದವು.
ಕ್ರಿಸ್ಮಸ್ ಹಿನ್ನೆಲೆಯಲ್ಲಿ ಚರ್ಚ್ ಗಳು ದೀಪಾಲಂಕಾರ, ನಕ್ಷತ್ರಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿವೆ. ಚರ್ಚ್ ಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ನಕ್ಷತ್ರಗಳಿಂದ ಮಿನುಗುತ್ತಿವೆ. ಕ್ರಿಸ್ಮಸ್ ಮರಕ್ಕೆ ಬಣ್ಣಬಣ್ಣದ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ ಚರ್ಚ್ ಆವರಣದಲ್ಲಿ ಏಸುಕ್ರಿಸ್ತನ ಮೂರ್ತಿಗಳನ್ನು ವಿಶೇಷವಾಗಿ ಸಿಂಗರಿಸಿ, ಏಸು ಜನಿಸಿದ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೇ ವಿಶೇಷ ಪೂಜಾ ಕಾರ್ಯಗಳು ನಡೆದವು. ಪೂಜೆ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಚರ್ಚ್ ಗಳಿಗೆ ಆಗಮಿಸಿ ಏಸುಕ್ರಿಸ್ತನಿಗೆ ನಮಿಸಿದರು.
ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಪಾರಂಪರಿಕ ಸಂತ ಫಿಲೋಮಿನಾ ಚರ್ಚ್ ನಲ್ಲಿ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ರಾತ್ರಿ 11 ರಿಂದ 12ರವರೆಗೆ ಕ್ಯಾರೋಲ್ ಗೀತಗಾಯನ ಚರ್ಚ್ ನಲ್ಲಿ ಪ್ರತಿಧ್ವನಿಸುತ್ತಿತ್ತು. ಚರ್ಚ್ ನಲ್ಲಿ ವಿಶೇಷ ದೀಪದ ಬೆಳಕಿನ ಅಲಂಕಾರದ ಜತೆಗೆ ಬಣ್ಣ ಬಣ್ಣದ ತಳಿರು ತೋರಣಗಳ ಸೊಬಗಿತ್ತು. ಚರ್ಚ್ ನ ಒಳಗೆ-ಹೊರಗೆ ಸಾವಿರಾರು ಕ್ರೈಸ್ತಬಾಂಧವರು ಏಸು ದೇವನ ಪ್ರಾರ್ಥನೆ ನಡೆಸುತ್ತಿದ್ದರು. ರಾತ್ರಿ ೧೨ ಗಂಟೆಯಾಗುತ್ತಿದ್ದಂತೆ ನಂಬಿಕೆಯ ಪ್ರತೀಕವಾಗಿ ಘಂಟನಾದ ಮೊಳಗಲಾರಂಭಿಸಿತು. ಶ್ವೇತವಸ್ತ್ರಧಾರಿಯಾದ ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ಚರ್ಚ್ ನ ಪರಿವಾರದೊಂದಿಗೆ ಛತ್ರಿ ಚಾಮರಗಳ ಹಿಮ್ಮೇಳದಲ್ಲಿ ಬಾಲಯೇಸುವಿನ ಪುಟ್ಟ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ತಂದರು.
ಚರ್ಚಿನ ಹೊರಭಾಗದಲ್ಲಿ ಗೋದಲಿಯನ್ನು ನಿರ್ಮಿಸಿದ್ದು, ಬಾಲ ಏಸುವಿನ ಮೂರ್ತಿಯನ್ನು ವಿಲಿಯಂ ಬಿಷಪ್ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಗೋದಲಿಯ ಪಕ್ಕದಲ್ಲಿ ಸುಂದರವಾದ ಸಂತ ಕ್ಲಾಸ್ ನ್ನು ನಿರ್ಮಿಸಲಾಗಿದ್ದು ಎಲ್ಲರ ಗಮನ ಸೆಳೆಯಿತು. ಇಸ್ರೆಲ್ ನ ಬೆತ್ಲೆಹೇಮ್ ನ ಕೊಟ್ಟಿಗೆಯೊಂದರಲ್ಲಿ ಜನ್ಮಪಡೆದ ಬಾಲ ಯೇಸು ಬೊಂಬೆ, ಯೇಸುವಿನ ತಂದೆ ಜೋಸೆಫ್, ತಾಯಿ ಮೇರಿ ಬೊಂಬೆಗಳ ಜತೆಗೆ ಕುರಿ, ಹಸು, ಒಂಟೆ ಇನ್ನಿತರ ಪ್ರಾಣಿಗಳ ಗೊಂಬೆಗಳು ಕಣ್ಮನ ಸೆಳೆದವು.
ಸಂತ ಫಿಲೋಮಿನಾ ಚರ್ಚ್ ಮಾತ್ರವಲ್ಲದೆ ನಗರದ ಗ್ರಾಮಾಂತರ ಬಸ್ ನಿಲ್ದಾಣದ ಸಮೀಪದ ವೆಸ್ಲಿ ಚರ್ಚ್, ಎನ್.ಆರ್.ಮೊಹಲ್ಲಾದಲ್ಲಿರುವ ಹಾರ್ಡ್ವಿಕ್ ಯೇಸು ಕರುಣಾಲಯ, ರಾಮಕೃಷ್ಣನಗರದಲ್ಲಿರುವ ಯೇಸು ಕೃಪಾಲಯ, ನಾಯ್ಡುನಗರದಲ್ಲಿರುವ ಬಾಲ ಯೇಸು ಮಂದಿರ, ಆರ್ಟಿಒ ವೃತ್ತ ಸಮೀಪದ ಚರ್ಚ್, ಹುಣಸೂರು ರಸ್ತೆಯಲ್ಲಿರುವ ಬಾಲ ಕ್ರಿಸ್ತಾಲಯ ಸೇರಿದಂತೆ ನಗರದ ಹಲವು ಚರ್ಚ್ ಗಳಲ್ಲಿ ಶನಿವಾರ ರಾತ್ರಿ ವಿಶೇಷ ಪೂಜೆಗಳು ನಡೆದವು.