ಚಾಮುಂಡಿಪುರಂ: ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ಆದ್ದರಿಂದ, ಪ್ರತಿ ಮನೆ-ಮನೆಯಲ್ಲೂ ಪ್ರತಿಯೊಬ್ಬನ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳಗುತ್ತಿರಲಿ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್ ಹೇಳಿದರು.
ಅಪೂರ್ವ ಸ್ನೇಹ ಬಳಗದ ವತಿಯಿಂದ ದೀಪಾವಳಿ ಅಂಗವಾಗಿ ಚಾಮುಂಡಿಪುರಂ ಹಾಗೂ ಬಂಡಿ ಕೇರಿ ಸುತ್ತಮುತ್ತ ಮನೆ ಮನೆಗೆ ತೆರಳಿ ಹಣತೆ ವಿತರಿಸುವ ಮೂಲಕ ಬೆಳಕಿನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕವಾಗಿವೆ. ಹಬ್ಬಗಳ ಹೆಸರೇ ಮನುಷ್ಯನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ, ಪುಣ್ಯ ಕಥೆಯನ್ನು ಬೆಸೆದು ಹಬ್ಬದ ಮೆರಗು ಹೆಚ್ಚಿಸಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.
ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ಮಾತನಾಡಿ, ಬೆಳಕಿನ ಹಬ್ಬಕ್ಕೆ ಮೆರುಗು ತರುವ ಪಟಾಕಿಗಳು, ಮಾಲಿನ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಅಪಾಯಕಾರಿ ಪಟಾಕಿಗಳ ಬಳಕೆ ನಿಯಂತ್ರಿಸಲು ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಸರ್ಕಾರಗಳೇ ಅನುಮತಿ ನೀಡಿರುವುದು ಸ್ವಾಗತಾರ್ಹ. ಕಡಿಮೆ ಮಾಲಿನ್ಯ ಉಂಟು ಮಾಡುವುದರಿಂದ ಹಸಿರು ಪಟಾಕಿ ಸಿಡಿಸುವುದು ತಪ್ಪೇನಲ್ಲ. ಹಬ್ಬ ಎಂದು ಭಾರಿ ಪ್ರಮಾಣದ ಪಟಾಕಿ ಸಿಡಿಸುವ ಮಿತಿಯನ್ನು ಕಡಿಮೆ ಮಾಡಿಕೊಂಡರೆ, ಭವಿಷ್ಯದ ದೃಷ್ಟಿಯಿಂದ ಎಲ್ಲರಿಗೂ ಒಳ್ಳೆಯದು. ಮಕ್ಕಳು ಪಟಾಕಿ ಸಿಡಿಸುವಾಗ ಮನೆಯವರು ಎಚ್ಚರ ವಹಿಸಬೇಕು ಎಂದರು.
ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಆದರ್ಶ, ಜಯರಾಮ್, ರಾಜಣ್ಣ, ಸುರೇಶ್ ಗೋಲ್ಡ್ ಸೇರಿದಂತೆ ಹಲವರು ಇದ್ದರು.