ಮೈಸೂರು: ಹೊಸ ವರ್ಷದ ಮೊದಲ ವಾರದಲ್ಲಿಯೇ ಪ್ರಮುಖ ಪ್ರವಾಸಿ ತಾಣವೂ ಆದ ಐತಿಹಾಸಿಕ ಹಿನ್ನೆಲೆಯುಳ್ಳ ಚುಂಚನಕಟ್ಟೆಯಲ್ಲಿ ಜಾನುವಾರು ಜಾತ್ರೆ ಆರಂಭಗೊಂಡಿದ್ದು, ಸಂತಸ ಮನೆ ಮಾಡಿದೆ.
ಕೃಷಿ ಚಟುವಟಿಕೆಗೆ ಯಂತ್ರಗಳು ಬಂದು ಹೊಲಗದ್ದೆಗಳ ಉಳುಮೆ ಸೇರಿದಂತೆ ವಿವಿಧ ಚಟುವಟಿಕೆಗಳಿಂದ ಎತ್ತುಗಳು ದೂರವಾಗಿದ್ದರೂ ಚುಂಚನಕಟ್ಟೆಯಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ವಿವಿಧ ಕಡೆಗಳಿಂದ ದನಗಳು ಬಂದಿದ್ದು ಗ್ರಾಮೀಣ ಸೊಗಡು ಮೇಳೈಸುತ್ತಿದೆ.
ಜಾತ್ರಾ ಮಹೋತ್ಸವದ ಶಾಸಕ ಡಿ. ರವಿಶಂಕರ್ ಚಾಲನೆ ನೀಡಿದ್ದು. ಚುಂಚನಕಟ್ಟೆಯಲ್ಲಿ ಜಾತ್ರಾ ಸಂಭ್ರಮ ಮನೆ ಮಾಡಿದೆ. ಗ್ರಾಮದ ಸುತ್ತಮುತ್ತಲ ಊರುಗಳಲ್ಲದೆ, ದೂರದ ಊರುಗಳಿಂದಲೂ ಜಾತ್ರೆಗೆ ಜನ ಜಾನುವಾರುಗಳೊಂದಿಗೆ ಆಗಮಿಸಿದ್ದು, ಜೋಡೆತ್ತುಗಳು ಒಂದಕ್ಕಿಂತ ಒಂದು ದಷ್ಠಪುಷ್ಠವಾಗಿ ಗಮನಸೆಳೆಯುತ್ತಿವೆ.
ಎತ್ತುಗಳನ್ನು ಸಿಂಗರಿಸಿ ಬಹು ವರ್ಣದ ಬಟ್ಟೆ ಹೊದಿಸಿ, ಮ್ಯೂಸಿಕಲ್ ವಿದ್ಯುತ್ ಬೆಳಗಿನಲ್ಲಿ ನಗಾರಿ, ಮಂಗಳಕರವಾದ್ಯ, ಡ್ಯಾನ್ಸ್, ಸಿಡಿಮದ್ದುಗಳ ಸಿಡಿಸುತ್ತ ಸಾಲು ಸಾಲು ಜಾನುವಾರುಗಳನ್ನು ಮೆರವಣಿಗೆಯಲ್ಲಿ ತರಲಾಗಿದ್ದು,.ಹತ್ತಾರು ಹಳ್ಳಿಕಾರ್ ತಳಿಗಳ ಎತ್ತುಗಳು ಆಕರ್ಷಿಸುತ್ತಿವೆ. ಇನ್ನು ಸೊಳ್ಳೆಪರದೆ, ಹುಲ್ಲುಹಾಸು ಹಾಸಿ ಸಿಂಗರಿಸಿದ ವಿಶೇಷ ವೈಭವದ ಚಪ್ಪರದಲ್ಲಿ ಕಣ್ಣು ಕೋರೈಸುವ ಬೆಳಕಿನಡಿ ಕಟ್ಟಿರುವ ರಾಸುಗಳನ್ನು ಕಣ್ತುಂಬಿ ಕೊಳ್ಳಲು ಜಾತ್ರೆಗೆ ಕುಟುಂಬದೊಂದಿಗೆ ಜನಸಾಗರವೇ ಹರಿದು ಬರುತ್ತಿದೆ.
ದಕ್ಷಿಣ ಭಾರತದಲ್ಲಿಯೇ ಹೆಸರು ವಾಸಿಯಾಗಿರುವ ಜಾನುವಾರು ಜಾತ್ರೆಯಲ್ಲಿ ಈಗ ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ರಾಮನಗರ, ಮಾಗಡಿ, ತುಮಕೂರು ಸೇರಿದಂತೆ ಇತರ ಜಿಲ್ಲೆಗಳ ಕರೆತಂದಿದ್ದು, ಸುಮಾರು 50 ಸಾವಿರದಿಂದ 3 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ರಾಸುಗಳಿದ್ದು ನಿತ್ಯ ಜಾನುವಾರುಗಳನ್ನು ಕೊಳ್ಳುವುದು. ಮಾರಾಟ ಮಾಡುವ ಭರಾಟೆ ಜೋರಾಗಿ ನಡೆಯುತ್ತಿದೆ.
ಇನ್ನು ಜಾನುವಾರುಗಳನ್ನು ಖರೀದಿಸಲು ದೂರದ ಗದಗ, ಹುಬ್ಬಳ್ಳಿ ಧಾರವಾಡ, ಗುಲ್ಬರ್ಗ ವಿಜಯಪುರ,, ದಾವಣಗೆರೆ ಜಿಲ್ಲೆಗಳಲ್ಲದೆ, ಆಂಧ್ರ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ರಾಜ್ಯದಿಂದಲೂ ಖರೀದಿದಾರರು ಬಂದು ಜಾತ್ರೆಯಲ್ಲಿ ಬಿಡಾರ ಹೂಡಿದ್ದಾರೆ. ಜಾತ್ರೆಯಲ್ಲೀಗ ಜಾನುವಾರುಗಳ ಅಲಂಕಾರಿಕ ವಸ್ತುಗಳು, ಸಿಹಿತಿಂಡಿ, ಸಂಚಾರಿ ಹೋಟೆಲ್, ತಂಪು ಪಾನೀಯ ಸೇರಿದಂತೆ ಮತ್ತಿತರ ಅಂಗಡಿಗಳು ತೆರೆದುಕೊಂಡಿದ್ದು, ಜಾತ್ರೆ ಜೋರಾಗಿ ನಡೆಯುತ್ತಿದೆ.
ಕೊರೋನಾ ಮತ್ತು ಚರ್ಮಗಂಟು ಕಾಯಿಲೆ ಹಿನ್ನೆಲೆಯಲ್ಲಿ ಚುಂಚನಕಟ್ಟೆ ಜಾನುವಾರು ಜಾತ್ರೆ ಕಳೆದ ಕೆಲವು ವರ್ಷಗಳ ಕಾಲ ನಡೆದಿರಲಿಲ್ಲ. ಈ ಬಾರಿ ಜಾತ್ರೆ ನಡೆಯುತ್ತಿರುವುದು ಜನರಲ್ಲಿ ಸಂಭ್ರಮ ಮೂಡಿಸಿದೆ.
ಸಧ್ಯ ಶಾಸಕ ಡಿ. ರವಿಶಂಕರ್ ಅವರ ನಿರ್ದೇಶನದಂತೆ ತಾಲೂಕು ಆಡಳಿತ ಜಾತ್ರೆಗೆ ತಾತ್ಕಾಲಿಕ ಪಶು ಹಾಗೂ ಸಾರ್ವಜನಿಕ ಆರೋಗ್ಯ ಕೇಂದ್ರ ತೆರೆದಿದ್ದಲ್ಲದೆ, ಸ್ವಚ್ಛತೆ, ಜಾನುವಾರುಗಳಿಗೆ ಮತ್ತು ಸಾರ್ವಜನಿಕ ಕುಡಿಯುವ ನೀರಿಗಾಗಿ ಕೈ ಪಂಪು, ನಲ್ಲಿ, ವಿದ್ಯುತ್ ವ್ಯವಸ್ಥೆ ಮಾಡಿದ್ದು. ಸಿಪಿಐ ಕೃಷ್ಣರಾಜು ನೇತೃತ್ವದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.