ಮಂಡ್ಯ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅನಧಿಕೃತವಾಗಿ ಚುನಾವಣಾ ವೆಚ್ಚವನ್ನು ತಡೆಗಟ್ಟಲು ಭಾರತ ಚುನಾವಣಾ ಆಯೋಗ ಕಾಯ್ದೆ ಹಾಗೂ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಮಾಡಲು ಸೂಚನೆ ನೀಡಿದೆ. ಅದರಂತೆ ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಣದ ವಹಿವಾಟಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಯಾವುದೇ ವ್ಯಕ್ತಿ ಯಾವುದೇ ಒಬ್ಬ ವ್ಯಕ್ತಿಯಿಂದ 2 ಲಕ್ಷಕ್ಕಿಂತ ಹೆಚ್ಚಿನ ನಗದು ಹಣವನ್ನು ಒಂದು ಸಂದರ್ಭದಲ್ಲಿ ಗಿಫ್ಟ್ ರೂಪದಲ್ಲಿ ಪಡೆಯಲು ಅವಕಾಶವಿರುವುದಿಲ್ಲ. ಒಬ್ಬ ವ್ಯಕ್ತಿ ರೂ.10ಸಾವಿರ ರೂ.ಗಳಿಗಿಂತ ಹೆಚ್ಚಿನ ನಗದು ರೂಪದ ಹಣದ ವಹಿವಾಟು ಒಂದು ದಿನದಲ್ಲಿ ನಡೆಸಲು ಅವಕಾಶವಿರುವುದಿಲ್ಲ, ಸಾಗಣಿಕೆದಾರರಿಗೆ 35ಸಾವಿರದವರೆಗೆ ಮಾತ್ರ ಅವಕಾಶವಿರುತ್ತದೆ. ಒಬ್ಬ ವ್ಯಕ್ತಿಯಿಂದ ಸಾಲ ಮರುಪಾವತಿ ಪಡೆಯುವಾಗ ರೂ.20ಸಾವಿರ ನಗದು ರೂಪದಲ್ಲಿ ಮಾತ್ರ ಪಡೆಯಲು ಅವಕಾಶವಿದೆ.
ಯಾವುದೇ ವ್ಯಕ್ತಿ ಹಣದ ರೂಪದಲ್ಲಿ ಲಂಚ, ಬೆಲೆ ಬಾಳುವ ವಸ್ತು, ಗಿಫ್ಟ್ ವೋಚರ್ಸ್, ಸಿಮ್ ಕಾರ್ಡ್ ,ಉಚಿತ ಇಂಧನ, ಪ್ರವಾಸ ಕಾರ್ಯಕ್ರಮ, ಊಟದ ವ್ಯವಸ್ಥೆ, ಮದ್ಯ ಹಂಚಿಕೆ ಇತ್ಯಾದಿಗಳ ಮೂಲಕ ಮತದಾರರನ್ನು ಸೆಳೆಯುವುದನ್ನು ನಿಷೇಧಿಸಲಾಗಿದೆ.
ಯಾವುದೇ ವ್ಯಕ್ತಿ ವಹಿವಾಟಿನಲ್ಲಿ ಸಂಶಯಾಸ್ಪದವಾಗಿ ವಸ್ತುಗಳನ್ನು ದಾಸ್ತಾನು ಮಾಡುವುದು, ಸಾಗಾಣಿಕೆ ಮಾಡುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ನಿಗಾ ವಹಿಸಲು ಸೆಕ್ಟರ್ ಮ್ಯಾಜಿಸ್ಟರೇಟ್, ಎಸ್.ಎಸ್.ಟಿ ತಂಡ, ಚೆಕ್ ಪೋಸ್ಟ್ ವಿ.ಎಸ್.ಟಿ, ಫೈಯಿಂಗ್ ಸ್ಕ್ವಾಡ್ ತಂಡ ರಚಿಸಲಾಗಿದೆ. ಈ ವ್ಯಕ್ತಿಗಳು ದಾಖಲೆಗಳನ್ನು ಪರಿಶೀಲಿಸುವ ಸಂಧರ್ಭದಲ್ಲಿ ಸಹಕರಿಸಿ ಮುಕ್ತ, ನ್ಯಾಯಸಮ್ಮತ ಚುನಾವಣಾ ನಡೆಸಲು ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದೆ.
ಸಾರ್ವಜನಿಕರು ಅಧಿಕೃತ ದಾಖಲೆ ಇಲ್ಲದೆ ರೂ.50ಸಾವಿರ ಕ್ಕಿಂತ ಹೆಚ್ಚಿನ ನಗದು ಇಟ್ಟುಕೊಂಡು ಓಡಾಡಬಾರದು. ಸೂಕ್ತ ದಾಖಲೆ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ವಸ್ತುಗಳು, ಸರಕನ್ನು ಸಾಗಣಿಕೆ ಹಾಗೂ ದಾಸ್ತಾನು ಮಾಡಬಾರದು. ಇದನ್ನು ಮಂಡ್ಯ ಜಿಲ್ಲೆಯ ಪ್ರತಿಯೊಬ್ಬ ನಾಗರೀಕರ ಗಮನಕ್ಕೆ ತಲುಪಿಸುವ ಹಿನ್ನೆಲೆಯಲ್ಲಿ ಮಾಧ್ಯಮದಲ್ಲಿ ಪ್ರಚುರ ಪಡಿಸುತ್ತಿದ್ದು, ಸದರಿ ನಿಯಮಗಳ ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಭಾತದ ದಂಡ ಸಂಹಿತೆಯ ಸೆಕ್ಸನ್ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಜಿಲ್ಲೆಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಅಂತ್ಯವಾಗುವವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ.