ಮೈಸೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಿದ್ಧತೆ ಆರಂಭಿಸಿದೆ. ಮಂಗಳವಾರ ಮುಂಜಾನೆ ನಗರ ಪೊಲೀಸರು ವಿವಿಧ ಠಾಣೆಗಳ ರೌಡಿ ಶೀಟರ್ಗಳ ಪರೇಡ್ ನಡೆಸಿದರು.
ಮಂಗಳವಾರ 76ಕ್ಕೂ ಹೆಚ್ಚು ರೌಡಿ ಶೀಟರ್ಗಳನ್ನು ಹೆಬ್ಬಾಳ ಠಾಣೆಗೆ ಕರೆಸಲಾಗಿದ್ದು, ಯಾವುದೇ ರೀತಿಯ ಸಮಾಜ ವಿರೋಧಿ ಚಟುವಟಿಕೆ ನಡೆಸಿದರೆ ನಗರದಿಂದ ಗಡಿಪಾರು ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ರಮೇಶ್ ಭಾನೋತ್ ಎಚ್ಚರಿಸಿದ್ದಾರೆ.
ಡಿಸಿಪಿ ಮುತ್ತುರಾಜ್, ಜಾನವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ರೌಡಿ ಶೀಟರ್ಗಳ ಪರೇಡ್ನಲ್ಲಿ ಪಾಲ್ಗೊಂಡಿದ್ದರು.
ಕಳೆದ ಎರಡು ತಿಂಗಳಲ್ಲಿ ಪೊಲೀಸರು ಎರಡು ಬಾರಿ ರೌಡಿ ಪರೇಡ್ ನಡೆಸಿದ್ದಾರೆ. ಮಂಗಳವಾರ ಪೊಲೀಸರು 76 ರೌಡಿ ಶೀಟರ್ಗಳ ಮನೆಗಳ ಮೇಲೆ ದಾಳಿ ನಡೆಸಿದ್ದು, ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ. ಈಗಾಗಲೇ 7 ರೌಡಿ ಶೀಟರ್ಗಳನ್ನು ನಗರದಿಂದ ಗಡಿಪಾರು ಮಾಡಲಾಗಿದ್ದು, 15 ಜನ ರೌಡಿಗಳನ್ನು ನಗರದಿಂದ ಗಡಿಪಾರು ಮಾಡಲು ಸಿದ್ಧತೆ ನಡೆದಿದೆ.
ಕಮಿಷನರ್ ರಮೇಶ ಬಾನೋತ್ ಮಾತನಾಡಿ, ಸಮಾಜಘಾತುಕ ಶಕ್ತಿಗಳ ಭಯೋತ್ಪಾದನೆಯನ್ನು ಕಿತ್ತೊಗೆದು ಶಾಂತಿ ಸ್ಥಾಪಿಸುವುದು ಪರೇಡ್ ನ ಉದ್ದೇಶವಾಗಿದೆ.
ಚುನಾವಣೆ ವೇಳೆ ರೌಡಿಗಳು ಹಲವು ಸರಗಳ್ಳತನದಲ್ಲಿ ಭಾಗಿಯಾಗುವ ಸಾಧ್ಯತೆ ಇದ್ದು, ಮೈಸೂರು ನಗರದ ಎಲ್ಲಾ ಪ್ರದೇಶಗಳಲ್ಲಿ ರೌಡಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವಿಶೇಷ ನಿಗಾ ಇರಿಸುವಂತೆ ಆಯಾ ಠಾಣೆಗಳ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಶೇ.50ರಷ್ಟು ರಿಯಾಯಿತಿಯನ್ನು ಇನ್ನೆರಡು ವಾರ ವಿಸ್ತರಿಸುವ ಸಾಧ್ಯತೆ ಇದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ರಮೇಶ್ ಬಾನೋತ್ ತಿಳಿಸಿದ್ದಾರೆ. 50ರಷ್ಟು ದಂಡ ವಸೂಲಿ ಈಗಾಗಲೇ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ದಂಡದಲ್ಲಿ ರಿಯಾಯಿತಿಯನ್ನು ಫೆಬ್ರವರಿ 14ರಿಂದ 28ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಮೈಸೂರಿನಲ್ಲಿ 9 ದಿನಗಳಲ್ಲಿ ಒಟ್ಟು 12 ಕೋಟಿ 30 ಲಕ್ಷದ 58 ಸಾವಿರದ 650 ರೂಪಾಯಿ ಸಂಗ್ರಹಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.