ತಿ.ನರಸೀಪುರ: ಜೆಡಿಎಸ್ -ಬಿಜೆಪಿ ಹೊಂದಾಣಿಕೆಯಿಂದ ಎಲ್ಲ 28 ಕ್ಷೇತ್ರಗಳನ್ನು ಮೈತ್ರಿಕೂಟ ಗೆಲ್ಲಲಿದೆ ಎಂದು ಚಾಮರಾಜನಗರ ಲೋಕಸಭಾ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ತಲಕಾಡು ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ – ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ -ಜೆಡಿಎಸ್ ಪಕ್ಷಗಳು ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿ ನಡುಕ ಶುರುವಾಗಿದೆ. . ಜೆಡಿಎಸ್ -ಬಿಜೆಪಿ ಹೊಂದಾಣಿಕೆಯಿಂದ ಮತ್ತು ಕುಮಾರಸ್ವಾಮಿ, ವಿಜಯೇಂದ್ರ ಚುನಾವಣಾ ತಂತ್ರಗಳನ್ನು ಅನುಸರಿಸುತ್ತಿದ್ದು, ಎಲ್ಲಾ ಕ್ಷೇತ್ರಗಳನ್ನು ಮೈತ್ರಿಕೂಟ ಗೆಲ್ಲಲಿದೆ ಎಂದರು.
ನಾನು 30ವರ್ಷಗಳ ಕಾಲ ರಾಜಕೀಯ ವನವಾಸ ಅನುಭವಿಸಿದ್ದೇನೆ. ಈಗ ಸುವರ್ಣ ಅವಕಾಶ ಸಿಕ್ಕಿದೆ. ಈ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟವಾಗಿದೆ. ಧರ್ಮ ಗೆಲ್ಲಲಿದೆ.. ಹಾಗಾಗಿ ಕಾಂಗ್ರೆಸ್ ಪಕ್ಷ ದುಡ್ದುಕೊಟ್ಟು ಮತ ಖರೀದಿ ಮುಂದಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನನ್ನ ಮೇಲೆ ಇಲ್ಲಸಲ್ಲದ ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ. ನೈತಿಕವಾಗಿ ಎದುರಿಸಲು ಸಾಧ್ಯವಾಗದೆ ವೈಯುಕ್ತಿಕ ತೇಜೋವಧೆ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ವಿಕಸಿತ ಭಾರತದ ದೂರದೃಷ್ಠಿಯಲ್ಲಿ ದೇಶವನ್ನು ಮುನ್ನೆಡೆಸಲು ನರೇಂದ್ರ ಮೋದಿ ಅವರು ಸನ್ನದ್ಧವಾಗಿದ್ದಾರೆ. ಅವರ ಕೈ ಬಲಪಡಿಸಲು ನನ್ನನ್ನು ಗೆಲ್ಲಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.