ಮೈಸೂರು: ಮೈಸೂರು ತಾಲೂಕು ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆಯ ಜಾಗೃತ ಕೋಶ, ಮೈಸೂರು ವಿಭಾಗೀಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಮಂಗಳವಾರ ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಕಾಳಸಂತೆಕೋರರ ಜತೆಗೆ ಯಾವುದೇ ಕಾರಣಕ್ಕೂ ರಾಜಿ ಆಗಬೇಡಿ. ಒಂದು ವೇಳೆ ರಾಜಿ ಮಾಡಿಕೊಂಡರೆ ಅದು ತಾಯಿಗೆ ದ್ರೋಹ ಮಾಡಿದಂತೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಅಧಿಕಾರಿಗಳು ರೈತರನ್ನು ಉಳಿಸುವ ಕೆಲಸ ಮಾಡಬೇಕು. ಆ ಮೂಲಕ ರೈತರಿಗೆ ಶಕ್ತಿ ತುಂಬಬೇಕು. ರಾಜ್ಯದಲ್ಲಿ ವರ್ಷಕ್ಕೆ 22 ಸಾವಿರ ಕೋಟಿ ಕೃಷಿ ಪರಿಕರಗಳ ವಹಿವಾಟು ನಡೆಯುತ್ತಿದ್ದರೂ ಯಾರ ಹಿಡಿತ ಇಲ್ಲದೇ ಕಾಳಸಂತೆಕೋರರು ವ್ಯಾಪಿಸಿಕೊಂಡಿದ್ದರು. ಇದರಿಂದ ರೈತ ಸಮುದಾಯಕ್ಕೆ ಕೊಡಲಿಪೆಟ್ಟು ಆಗುತ್ತಿತ್ತು. ಹೀಗಾಗಿ, ಕೃಷಿ ಇಲಾಖೆಯ ಜಾಗೃತ ಕೋಶದ ಅಧಿಕಾರಿಗಳು ಕಾಳಸಂತೆಕೋರರಿಗೆ ಸಿಂಹಸ್ವಪ್ನವಾಗಿದ್ದಾರೆ ಎಂದು ಹೇಳಿದರು.
ಗುಣಮಟ್ಟದ ಕೃಷಿ ಪರಿಕರಗಳನ್ನು ಸಕಾಲದಲ್ಲಿ ರೈತರಿಗೆ ದೊರಕಿಸುವ ನಿಟ್ಟಿನಲ್ಲಿ ಜಾಗೃತ ಕೋಶದ ಬಲವರ್ಧನೆ ಅವಶ್ಯಕತೆ ಇರುವುದನ್ನು ಮನಗಂಡು ರಾಜ್ಯ ಸರ್ಕಾರ ಪ್ರತಿ ಕಂದಾಯ ವಿಭಾಗಕ್ಕೆ ಒಂದರಂತೆ ಹಾಲಿ ಇರುವ ಬೆಂಗಳೂರು ಮತ್ತು ಬೆಳಗಾವಿ ವಿಭಾಗಗಳೊಂದಿಗೆ ಹೊಸದಾಗಿ ಮೈಸೂರು ಮತ್ತು ಕಲಬುರಗಿ ವಿಭಾಗಗಳನ್ನು ಸೃಜಿಸಲಾಗಿದೆ. ಮೈಸೂರು ವಿಭಾಗದಲ್ಲಿ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಒಟ್ಟು 8 ಜಿಲ್ಲೆಗಳು ಸೇರಿವೆ ಎಂದರು.
ಕಳೆದ ಎರಡೂವರೆ ವರ್ಷಗಳಿಂದ ಪೊಲೀಸರಂತೆ ಜಾಗೃತ ಕೋಶದ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ರೈತರ ಜೀವನ ಮತ್ತು ಸಾವಿನ ನಡುವೆ ಇರುವ ಪ್ರಶ್ನೆ ಆಗಿರುವುದರಿಂದ ಜಾಗೃತಕೋಶಕ್ಕೆ ಮುಕ್ತ ಅವಕಾಶ ನೀಡಲಾಗಿದ್ದು, ಕಳಪೆ ಬಿತ್ತನೆ ಬೀಜ, ರಸಗೊಬ್ಬಸ, ಔಷಧಗಳ ಮಾರಾಟ ಕಂಡು ಬಂದಲ್ಲಿ ದಾಳಿ ನಡೆಸಿ ಕ್ರಮ ವಹಿಸುತ್ತಿದ್ದಾರೆ. ಈವರೆಗೂ 27 ಕೋಟಿ ಮೌಲ್ಯದ ಕಳಪೆ ಗುಣಮಟ್ಟದ ಕೃಷಿ ಪರಿಕರಗಳನ್ನು ಜಪ್ತಿ ಮಾಡಿ, 280 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದರೂ ಕ್ರಮ ವಿಳಂಬವಾಗುತ್ತಿತ್ತು. ಹೀಗಾಗಿ, ಸೆಕ್ಷನ್ 420 ಅಡಿಯಲ್ಲಿ ರೈತರಿಗೆ ಮೋಸ ಮಾಡಿರುವುದಾಗಿ ಪ್ರಕರಣ ದಾಖಲಿಸುತ್ತಿರುವುದರಿಂದ ಪೊಲೀಸರು ಸಹ ಕ್ರಮ ವಹಿಸುತ್ತಿದ್ದಾರೆ. ಕೃಷಿ ಉಳಿಯಬೇಕೆಂದರೇ ಉತ್ತಮವಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಔಷಧಿಗಳನ್ನು ಪೂರೈಸಬೇಕಿದೆ ಎಂದರು.
ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಜಿ.ಟಿ. ದೇವೇಗೌಡ, ಮೃಗಾಲಯ ಪ್ರಾಧಿಕಾರ ಅಧಕ್ಷ ಎಲ್.ಆರ್.ಮಹದೇವಸ್ವಾಮಿ, ವಸ್ತುಪ್ರದರ್ಶನ ಪ್ರಾಧಿಕಾರ ಅಧಕ್ಷ ಎ.ಹೇಮಂತ್ಕುಮಾರ್ಗೌಡ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧಕ್ಷ ಎನ್.ಆರ್.ಕೃಷ್ಣಪ್ಪಗೌಡ, ಜಂಗಲ್ ಲಾಡ್ಜ್ ಅಧಕ್ಷ ಅಪ್ಪಣ್ಣ, ನಾಗನಹಳ್ಳಿ ಗ್ರಾಪಂ ಅಧಕ್ಷ ಎನ್.ಎಂ.ಭಾಸ್ಕರ್, ಉಪಾಧಕ್ಷೆ ನಾಗರತ್ನ, ಜಿಪಂ ಮಾಜಿ ಸದಸ್ಯ ದಿನೇಶ್, ಜಿಲ್ಲಾ ಕೃಷಿಕ ಸಮಾಜ ಅಧಕ್ಷ ಕಲ್ಮಳ್ಳಿ ಶಿವಕುಮಾರ್, ತಾಲೂಕು ಕೃಷಿಕ ಸಮಾಜ ಅಧಕ್ಷ ಕೆ.ಬಿ.ಲಿಂಗರಾಜು, ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಸಿ.ಕಳಸದ, ಆಯುಕ್ತ ಬಿ.ಶರತ್, ನಿರ್ದೇಶಕಿ ಡಾ.ಸಿ.ಎನ್.ನಂದಿನಿಕುಮಾರಿ, ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಡಾ.ಬಿ.ವೈ.ಶ್ರೀನಿವಾಸ್, ಜಾಗೃತ ಕೋಶ ಹೆಚ್ಚುವರಿ ಕೃಷಿ ನಿರ್ದೇಶಕ ಡಾ.ಕೆ.ಜಿ.ಅನೂಪ್ ಮೊದಲಾದವರು ಇದ್ದರು.