ನಂಜನಗೂಡು: ಡಸ್ಟ್ ತುಂಬಿದ ಟಿಪ್ಪರ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಐಷಾರಾಮಿ ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಎಲಚಗೆರೆ ಗ್ರಾಮದ ಬಳಿ ನಡೆದಿದೆ.
ನಂಜನಗೂಡು ಬೇಗೂರು ಮುಖ್ಯ ರಸ್ತೆಯ ಎಲಚಗೆರೆ ಗೇಟ್ ಬಳಿ ಡಸ್ಟ್ ತುಂಬಿದ ಟಿಪ್ಪರ್ ಮತ್ತು ಕಾರು ಅತಿ ವೇಗವಾಗಿ ಸಂಚರಿಸತೊಡಗಿವೆ. ಐಷಾರಾಮಿ ಕಾರಿಗೆ ಡಿಕ್ಕಿ ಹೊಡೆದ ಟಿಪ್ಪರ್ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. 40ವರ್ಷದ ಜಗದೀಶ್, 40ವರ್ಷದ ಜಾನ್, 29 ವರ್ಷದ ಸುಜಯ್, 34 ವರ್ಷದ ಸತೀಶ್ ಗಂಭೀರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಟಿಪ್ಪರ್ ಪಲ್ಟಿಯಾಗಿದ್ದು, ಕಾರು ಜಖಂಗೊಂಡಿದೆ. ಅತಿ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರು ಮತ್ತು ಟಿಪ್ಪರ್ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.