ಯಳಂದೂರು: ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ಇನ್ನೋವಾ ಕಾರಿನಲ್ಲಿ ಬಂದ ಕಳ್ಳರು ಬರೋಬ್ಬರಿ 25ಕುರಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಗ್ರಾಮದ ಮಹೇಶ್ ಎಂಬುವವರು ತಮ್ಮ ಮನೆ ಮುಂಭಾಗದ ಕೊಟ್ಟಿಗೆಯಲ್ಲಿ ಕಳೆದ ಕೆಲ ವರ್ಷಗಳಿಂದ ಕುರಿ ಸಾಕಾಣಿಕೆ ಮಾಡಿಕೊಂಡು ಬಂದಿದ್ದು ಇದನ್ನೇ ಮುಖ್ಯ ವೃತ್ತಿಯಾಗಿಸಿಕೊಂಡಿದ್ದರು. ಪ್ರಸ್ತುತ 50ಕ್ಕೂ ಹೆಚ್ಚು ಕುರಿಗಳನ್ನು ಇವರು ಸಾಕಿಕೊಂಡಿದ್ದರು. ಆದರೆ ರಾತ್ರೋರಾತ್ರಿ ಕಳ್ಳರು ಇವರ ಕೊಟ್ಟಿಗೆಗೆ ನುಗ್ಗಿ 25 ಕುರಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಮಧ್ಯರಾತ್ರಿ 2.30 ರಿಂದ 3ಗಂಟೆಯ ಸಮಯದಲ್ಲಿ ಇನ್ನೋವಾ ಕಾರಿನಲ್ಲಿ ಬಂದಿದ್ದ ಕಳ್ಳರ ಗುಂಪು ಕುರಿಗಳನ್ನು ಕಾರಿನಲ್ಲಿ ತುಂಬಿದೆ. ಈ ಎಲ್ಲಾ ಕುರಿ ತುಂಬಿ ಕೊನೆಯಲ್ಲಿ ಕುರಿಗಳ ಸದ್ದು ಮಾಲೀಕ ಮಹೇಶ್ಗೆ ಕೇಳಿಸಿದೆ. ಕೂಡಲೇ ಹೊರಗೆ ಬಂದು ನೋಡುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತ ಕಳ್ಳರು ಕಾರನ್ನು ವೇಗವಾಗಿ ಚಾಲಿಸಿಕೊಂಡು ಇಲ್ಲಿಂದ ತೆರಳಿದ್ದಾರೆ. ಈ ಕೃತ್ಯ ನಡೆಸುವ ಮುಂಚೆಯೇ ಇವರು ಅಕ್ಕಪಕ್ಕದ ಮನೆಯ ಚಿಲಕಗಳನ್ನು ಹೊರಗಿನಿಂದ ಹಾಕಿದ್ದು ತಮ್ಮ ಕೈಚಳಕವನ್ನು ಪ್ರದರ್ಶಿಸಿದ್ದಾರೆ.
ಈ ಬಗ್ಗೆ ಮಹೇಶ್ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಪೇದೆಗಳಾದ ವಾಸುದೇವ, ಜಡೇಸ್ವಾಮಿ, ರಾಮಶೆಟ್ಟಿ, ಪ್ರಮೋದ್ ನೇತೃತ್ವದ ತಂಡ ಭೇಟಿ ನೀಡಿ ಸ್ಥಳ ಮಹಜರು ನಡೆಸಿ, ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ವಹಿಸಿದ್ದಾರೆ.