ಮೈಸೂರು: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ 25 ಹೆಚ್ಚುವರಿ ಮತಗಳಿವೆ, ಎರಡನೇ ಪ್ರಾಶಸ್ತ್ಯದ ಮತಗಳು ನಮಗೆ ಬೀಳುತ್ತವೆ, ಜೆಡಿಎಸ್ ಮತ್ತು ಬಿಜೆಪಿಯವರು ಆತ್ಮಸಾಕ್ಷಿಗೆ ಅನುಗುಣವಾಗಿ ನಮಗೆ ಮತ ಹಾಕುತ್ತಾರೆ ಆ ಮೂಲಕ ಗೆಲುವು ನಮ್ಮದಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಾವು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದರಿಂದ ಜೆಡಿಎಸ್ ಪಕ್ಷದ ಮತಗಳು ನಮಗೆ ಸಿಗುತ್ತವೆ ಎಂಬ ನಂಬಿಕೆಯಿದೆ. ಆತ್ಮಸಾಕ್ಷಿ ಮತಗಳು ಇಂತಿಷ್ಟೇ ಬರುತ್ತವೆ ಎಂದು ಈಗಲೇ ಹೇಳೋಕೆ ಆಗಲ್ಲ, ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಆತ್ಮಸಾಕ್ಷಿ ಮತಗಳು ನಮಗೆ ಸಿಗುತ್ತದೆ. ಬಿಜೆಪಿ ಗೆಲ್ಲಬಾರದು ಎಂಬ ಉದ್ದೇಶ ಕುಮಾರಸ್ವಾಮಿಗೆ ಇದ್ದರೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಿ ನಮಗೆ ಬೆಂಬಲಿಸಲಿ, ನಮ್ಮದು ಜಾತ್ಯಾತೀತ ಪಕ್ಷ ಎಂದು ಹೇಳಿದರು.
ಇಬ್ರಾಹಿಂ ನಾಮಕಾವಸ್ತೆಗೆ ಜೆಡಿಎಸ್ ಪಕ್ಷದ ಅಧ್ಯಕ್ಷ ಆಗಿದ್ದಾರೆ. ಅವರಿಗೆ ಮಾನ ಮರ್ಯಾದೆ ಇಲ್ಲ. ಕೂತ್ಕೊ ಅಂದರೆ ಕೂತ್ಕೋಬೇಕು, ನಿಂತ್ಕೊ ಅಂದರೆ ನಿಂತ್ಕೊಬೇಕು ಅಷ್ಟೆ ಎಂದು ಗೇಲಿ ಮಾಡಿದರು. ಕಾಂಗ್ರೆಸ್ ಪಕ್ಷ ದಲಿತರು ಮತ್ತು ಸಂವಿಧಾನಕ್ಕೆ ಬದ್ಧತೆ ಇರುವ ಪಕ್ಷ. ನಮ್ಮ ಆಡಳಿತದ ಕಾಲದಲ್ಲೇ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡಬೇಕು ಎಂದು ಕಾನೂನು ತಂದಿದ್ದು, ಸರ್ಕಾರಿ ಟೆಂಡರ್ ಗಳಲ್ಲಿ ಮೀಸಲಾತಿ ತಂದಿದ್ದು, ಬಡ್ತಿ ಮೀಸಲಾತಿಯನ್ನು ಉಳಿಸಿದ್ದು ನಾವು. ನಮಗೆ ದಲಿತರ ಕಾಳಜಿ ಬಗ್ಗೆ ಯಾರು ಹೇಳಿಕೊಡೋದು ಬೇಡ ಎಂದು ತಿರುಗೇಟು ನೀಡಿದರು.