ಮೈಸೂರು: ರಾಜ್ಯದ ಪ್ರತಿಷ್ಠಿತ ಕ್ರಿಯಾಶೀಲ ಕಾರ್ಮಿಕ ಸಂಘಟನೆಗಳಲ್ಲೊಂದಾದ ನಗರದ ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಸಾಹಿತಿ ಹಾಗೂ ಪತ್ರಕರ್ತ ಬನ್ನೂರು ಕೆ.ರಾಜು ಅವರ ಹುಟ್ಟುಹಬ್ಬದ ಪ್ರಯುಕ್ತ ಸನ್ಮಾನಿಸಿ ಗೌರವಿಸಲಾಯಿತು.
ಕೃಷ್ಣರಾಜ ಮೊಹಲ್ಲಾದ ಅಗ್ರಹಾರದಲ್ಲಿರುವ ಸಾಹಿತಿ ಬನ್ನೂರು ಕೆ.ರಾಜು ಅವರ ಸ್ವಗೃಹದಲ್ಲಿ ಬಹಳ ಸರಳವಾಗಿ ನಡೆದ ಹುಟ್ಟುಹಬ್ಬದ ಪುಟ್ಟ ಕಾರ್ಯಕ್ರಮದಲ್ಲಿ ಬನ್ನೂರು ರಾಜು ಅವರನ್ನು ಅವರ ಪತ್ನಿ ಮಹಾಲಕ್ಷ್ಮಿ ಜೊತೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಫಲ-ತಾಂಬೂಲ ಹಾರ-ತುರಾಯಿಯೊಡನೆ ಸಂಘದಿಂದ ಅಭಿನಂದಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಹೇಶ್ ಎಸ್. ಜಯನಗರ ಅವರು, ಮಹಾನ್ ಸಾಹಿತ್ಯ ಪ್ರತಿಭೆಯುಳ್ಳ ಬನ್ನೂರು ರಾಜು ಅವರು ನಮ್ಮ ನಡುವಿನ ಮಹತ್ವದ ಸಾಹಿತಿಗಳಾಗಿದ್ದು ಬರವಣಿಗೆಯನ್ನೇ ಬದುಕು ಮಾಡಿಕೊಂಡು ಸಾಹಿತ್ಯ ಮತ್ತು ಪತ್ರಿಕಾರಂಗಗಳೆರಡರಲ್ಲೂ ಅಕ್ಷರ ಕಾಯಕ ಮಾಡುತ್ತಾ ಕನ್ನಡ ಸಾಹಿತ್ಯ ಲೋಕವನ್ನು ಬೆಳಗುತ್ತಿದ್ದಾರೆ.ನೂರಾರು ಪುಸ್ತಕಗಳನ್ನು, ಸಾವಿರಾರು ಲೇಖನಗಳನ್ನು ದಾಖಲೆ ಪ್ರಮಾಣದಲ್ಲಿ ಬರೆದು ಕನ್ನಡಮ್ಮನ ಮಡಿಲು ತುಂಬಿರುವ, ಇವತ್ತಿಗೂ ತುಂಬುತ್ತಲೇ ಇರುವ ಕನ್ನಡ ನುಡಿ ಸೇವಕ ಬನ್ನೂರು ರಾಜು ಅವರ ಸಾಹಿತ್ಯದ ಬದುಕು ಬಂಗಾರವಾಗಲೆಂದು ಹೇಳಿ ಶುಭ ಹಾರೈಸಿದರು.
ಸಂಘದ ಉಪಾಧ್ಯಕ್ಷ ಎಂ. ಎಸ್. ಸುರೇಶ್ ಕುಮಾರ್, ಕಾರ್ಯದರ್ಶಿ ಕಾಳೇಗೌಡ, ಜಂಟಿ ಕಾರ್ಯದರ್ಶಿ ಎಸ್. ಪಳನಿ, ಖಜಾಂಚಿ ಎಂ.ರವಿಕುಮಾರ್, ನಿರ್ದೇಶಕರಾದ ಚಂದ್ರೇಗೌಡ ಹಾಗೂ ಮೋಹನ್ ಮುಂತಾದವರು ಉಪಸ್ಥಿತರಿದ್ದು ಸಾಹಿತಿ ಬನ್ನೂರು ರಾಜು ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹಾಗೂ ಅವರ ಅಕ್ಷರ ಜೀವನದ ಸಾಹಿತ್ಯ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದರು.