ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನಲ್ಲಿರು ರತ್ನಪುರಿ ಕ್ಷೇತ್ರವು ಭಾವೈಕ್ಯತೆಯ ಸಂಗಮವಾಗಿದ್ದು ಇಲ್ಲಿರುವ ದರ್ಗಾ ಮತ್ತು ಆಂಜನೇಯ ಸ್ವಾಮಿ ದೇವಾಲಯ ಅಕ್ಕಪಕ್ಕದಲ್ಲಿದ್ದು, ಒಟ್ಟಿಗೆ ಜಾತ್ರೆ ನಡೆಯುವುದು ವಿಶೇಷವಾಗಿದೆ.
ಈ ಬಾರಿ ಮಾ.18ರಿಂದ 21ರವರೆಗೆ ರತ್ನಪುರಿಯಲ್ಲಿ ಆಂಜನೇಯಸ್ವಾಮಿಯ ಮಹಾಭಿಷೇಕ, ಪಲ್ಲಕಿ ಉತ್ಸವ ಹಾಗೂ ಮುಸ್ಲಿಮರ ಜಮಾಲ್ಬೀಬೀಮಾ ಸಾಹೇಬರ ಗಂಧೋತ್ಸವ(ಉರುಸ್)ವು ನಡೆಯಲಿದೆ. ಈ ಜಾತ್ರೆ ಭಾವೈಕ್ಯತೆಯನ್ನು ಸಾರುವುದರಿಂದ ಇಲ್ಲಿಗೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ನೆರವೇರಿಸುವಂತೆ ದೇವರಲ್ಲಿ ಬೇಡಿಕೊಳ್ಳುತ್ತಾರೆ.
ಇತರೆ ಜಾತ್ರೆಗಳಲ್ಲಿ ನಡೆಯುವಂತೆ ಇಲ್ಲಿಯೂ ಗಂಧೋತ್ಸವ, ಕೊಂಡೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದಲ್ಲದೆ, ಜಾನುವಾರುಗಳ ಜಾತ್ರೆ ಪ್ರಮುಖ ಆಕರ್ಷಣೆಯಾಗಿದೆ. ರೈತರಿಗೆ ಆದ್ಯತೆ ನೀಡುವ ಸಲುವಾಗಿ ಜಾನುವಾರು ಜಾತ್ರೆಗೆ ಆದ್ಯತೆ ನೀಡಲಾಗುತ್ತಿದ್ದು, ಈ ಜಾತ್ರೆಗೆ ಸುತ್ತ ಮುತ್ತಲ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ತಂದು ಕಟ್ಟುತ್ತಾರೆ. ಪ್ರಮುಖ, ಉಳಿದಂತೆ ಉತ್ಸವ, ಕೊಂಡೋತ್ಸವ, ಗಂಧೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಜಾತ್ರೆ ವೇಳೆ ಎಲ್ಲರೂ ಜಾಗರಣೆಯಲ್ಲಿ ಭಾಗವಹಿಸುವುದು ಗಮನಾರ್ಹವಾಗಿದೆ.
ಜಾತ್ರಾಮಾಳದಲ್ಲಿನ ಐತಿಹ್ಯವುಳ್ಳ ಶ್ರೀ ಅಂಜನೇಯಸ್ವಾಮಿ ದೇಗುಲ ಸಮಿತಿಯು ಕಳೆದ 54 ವರ್ಷಗಳಿಂದ ಮಹಾಭಿಷೇಕ, ಪಲ್ಲಕ್ಕಿ ಉತ್ಸವ ಹಾಗೂ ಕೊಂಡೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದು, ಕಳೆದ 15ವರ್ಷಗಳಿಂದ ಉತ್ಸವದಂದು ಸಾವಿರಾರು ಮಂದಿಗೆ ಅನ್ನದಾನ ನಡೆಸಲಾಗುತ್ತದೆ. ಜಾತ್ರಾಮಾಳ ಪಕ್ಕದಲ್ಲಿರುವ ಸಂತೆಕೆರೆಯ ದೊಡ್ಡ ಕೆರೆಯ ನೀರು ಎಂದಿಗೂ ಬತ್ತದಿರುವುದು ದೈವ ಕೃಪೆಯಾಗಿದ್ದು, ಈ ಕೆರೆಯಲ್ಲೇ ಸ್ನಾನ ಮಾಡಿ ಬಂದು ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಜಮಾಲ್ ಬೀಬೀಮಾ ಸಾಹೇಬರ ದರ್ಗಾಕ್ಕೆ ಮುಸ್ಲಿಂಬಾಂಧವರು ಹುಣಸೂರು ಹಾಗೂ ಕುಡಿನೀರು ಮುದ್ದನಹಳ್ಳಿಗಳಿಂದ ಗಂಧವನ್ನು ಮೆರವಣಿಗೆಯಲ್ಲಿ ತಂದು ಗೋರಿಗೆ ಪೂಜೆಸಲ್ಲಿಸಿ, ಗಂಧೋತ್ಸವ ನೆರವೇರಿಸುತ್ತಾರೆ. ಮುಸ್ಲಿಂ- ಹಿಂದೂ ಎನ್ನದೆ ಎಲ್ಲರೂ ಒಟ್ಟಾಗಿ ಗೋರಿ ಬಳಿ ಧೂಪ ಹಾಕಿ ಹರಕೆ ತೀರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ