ಮೈಸೂರು: ಚಾಮರಾಜ ಮೃಗಾಲಯದ ನಿರ್ವಹಣೆ ದೃಷ್ಟಿಯಿಂದ ಟಿಕೆಟ್ ದರದಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಮೃಗಾಲಯ ವ್ಯಾಪ್ತಿಯಲ್ಲಿರುವ ಕಾರಂಜಿ ಕೆರೆಯ ಟಿಕೆಟ್ ದರವನ್ನು 5 ರಿಂದ 10 ರೂ. ಹೆಚ್ಚಿಸಲಾಗಿದ್ದು, ಜತೆಗೆ ಮೃಗಾಲಯ ಮತ್ತು ಕಾರಂಜಿ ಕೆರೆಯ ಕಾಂಬೋ ಆಫರ್ ಟಿಕೆಟ್ನ ದರದಲ್ಲಿಯೂ ಸಹ ಏರಿಕೆ ಮಾಡಲಾಗಿದೆ.
ಮೈಸೂರಿನ ಕೂರ್ಗಳ್ಳಿ ಯಲ್ಲಿರುವ ಮೃಗಾಲಯ ಪ್ರಾಧಿಕಾರದ ಆಡಳಿತ ಕಚೇರಿ ಆವರಣದಲ್ಲಿ ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹಾದೇವ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ 150ನೇ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಕಾರಂಜಿ ಕೆರೆಯ ಟಿಕೆಟ್ ದರವನ್ನು ವಯಸ್ಕರಿಗೆ 50 ರೂ. ಮಕ್ಕಳಿಗೆ 25 ರೂ.ಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರವೇಶದ ಕಾಂಬೋ ಟಿಕೆಟ್ ದರವನ್ನು ವಯಸ್ಕರಿಗೆ 130 ರೂ. ಮತ್ತು ಮಕ್ಕಳಿಗೆ 70 ರೂ. ಹೆಚ್ಚಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವ ಸ್ವಾಮಿ ಮಾಹಿತಿ ನೀಡಿದರು.
ಮೂರು ಪ್ರಾಣಿ ಮನೆ ನಿರ್ಮಾಣಕ್ಕೆ ಒಪ್ಪಿಗೆ: ಮೃಗಾಲಯದ ಆವರಣದಲ್ಲಿ ಆರ್ಬಿಐ ನೋಟು ಮುದ್ರಣಾಲಯ ವತಿಯಿಂದ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದಿಂದ ಗೊರಿಲ್ಲ ಫ್ಯಾಮಿಲಿ ಪ್ರಾಣಿ ಮನೆ, ಓರಾಂಗೂಟಾನ್ ಮನೆ ಮತ್ತು ಕ್ಲಾತ್ ಕರಡಿ ಮನೆ ನಿರ್ಮಾಣಕ್ಕೆ ತಾಂತ್ರಿಕ ಒಪ್ಪಿಗೆ ನೀಡಲಾಯಿತು.
ಮುಖ್ಯವಾಗಿ ಮೃಗಾಲಯದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪಂಚಾಯತ್ ರಾಜ್ ಇಲಾಖೆ ವತಿಯಿಂದ ಶಿವಮೊಗ್ಗ ಮೃಗಾಲಯಕ್ಕೆ ರಸ್ತೆ ಮತ್ತು ಕೆರೆಗಳ ಅಭಿವೃದ್ಧಿಗಾಗಿ 4 ಕೋಟಿ ರೂ ಅನುದಾನಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಹಂಪಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿ ಜಿರಾಫೆ ಆವರಣದ ನಿರ್ವಹಣೆಗೆ 25 ಲಕ್ಷ ರೂ ಅಂದಾಜು ಪಟ್ಟಿಗೆ ಅನುಮೋದನೆ ನೀಡಲಾಯಿತು. ಬನ್ನೇರುಘಟ್ಟ ಮೃಗಾಲಯದಿಂದ ಹಂಪಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ನೀರಾನೆಯನ್ನು ನೀಡಲಾಗುತ್ತಿದ್ದು, ಅದಕ್ಕೆ ಆವರಣ ನಿರ್ಮಾಣ ಮಾಡಲು ಜಿಲ್ಲಾ ಖನಿಜ ಪ್ರತಿಷ್ಠಾನದ ಅಡಿಯಲ್ಲಿ ಹಂಚಿಕೆಯಾದ 62 ಲಕ್ಷ ರೂಗಳಿಗೆ ತಾಂತ್ರಿಕ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಗೋಗಿ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಸಂಜಯ ಎಸ್.ಬಿಜೂರು, ಆರ್ಥಿಕ ಇಲಾಖೆ ಉಪ ಕಾರ್ಯದರ್ಶಿ ವತ್ಸಲ ಕುಮಾರಿ. ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಮೇಯರ್ ಸುನಂದ ಪಾಲನೇತ್ರ, ಗೋಕುಲ್, ಜ್ಯೋತಿ ರೇಚಣ, ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಜಿತ್ ಎಂ. ಕುಲಕರ್ಣಿ ಇದ್ದರು.