ಮೈಸೂರು: ಮುಸಲ್ಮಾನರ ಮತಗಳಿಕೆಗಾಗಿ ಮುಸ್ಲಿಂ ಓಲೈಕೆ ಮಾಡಲು ಕುಮಾರಸ್ವಾಮಿ, ಸಿದ್ದರಾಮಯ್ಯ ನಡುವೆ ಪೈಪೋಟಿ ಶುರುವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಲೇವಡಿ ಮಾಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಮೌನ ಮುರಿಯಬೇಕು ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಮ್ಮ ಮುಖ್ಯಮಂತ್ರಿಗಳು ಮೌನಿಯಾಗಿಲ್ಲ. ಉತ್ತಮ ವಾಗ್ಮಿಗಳು, ಅವರು ಸರಿಯಾಗಿ ಕೆಲಸ ಮಾಡ್ತಿzರೆ. ಯಾವ ವಿಚಾರಕ್ಕೆ ಏನು ಹೇಳಬೇಕೋ ಹೇಳ್ತಾರೆ ಎಂದರು.
ಅಲ್ ಖೈದಾ ವೀಡಿಯೋ ಹಿಂದೆ ಆರ್ಎಸ್ಎಸ್ ಕೈವಾಡ ಇದೆ ಎಂಬ ಸಿದ್ದರಾಮಯ್ಯ ಆರೋಪ ಕುರಿತು ಪ್ರತಿಕ್ರಿಯಿಸಿ, ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಈ ರೀತಿ ಯಾವುದೇ ಪುರಾವೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಮೊದಲು ಅಲ್ ಖೈದಾ ಸಂಘಟನೆಯ ಹೇಳಿಕೆ ಖಂಡಿಸಬೇಕು. ಇದನ್ನು ಬಿಟ್ಟು ಈ ರೀತಿ ಬೇಜಾವಾಬ್ದಾರಿಯಾಗಿ ಒಂದು ಸಂಘಟನೆ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಖಂಡಿಸಿದರು.
ಸಮಾಜ ಇದನ್ನು ಸೂಕ್ಷ್ಮವಾಗಿ ನೋಡುತ್ತಿದೆ. ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಯಾವ ಬೆಲೆಯೂ ಇಲ್ಲ. ಹಿಂದೆ ಹಿಜಾಬ್ ಬಗ್ಗೆ ಮಾತಾಡುತ್ತಾ ಅದನ್ನು ಖಾವಿಗೆ ಹೋಲಿಸಿ ಜನರಿಂದ ಟೀಕೆಗೆ ಒಳಗಾಗಿದ್ದರು. ಈ ಹೇಳಿಕೆಯಿಂದಲೂ ಸಿದ್ದರಾಮಯ್ಯ ಇದೇ ರೀತಿ ಟೀಕೆಗೆ ಒಳಗಾಗುತ್ತಾರೆ. ವಿಡಿಯೋ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿzರೆ. ಈ ಸಂದರ್ಭದಲ್ಲಿ ಇಂತವರನ್ನು ವಿಚಾರಣೆ ಮಾಡಿ, ಹೀಗೆ ವಿಚಾರಣೆ ಮಾಡಿ ಎಂದು ನಾವು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದರು.
ಬೆಲೆ ಏರಿಕೆ ವಿಚಾರ ಡೈವರ್ಟ್ ಮಾಡಲು ಎಮೋಷನಲ್ ಕಾರ್ಡ್ ಪ್ಲೇ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಇನ್ನೂ ಅಂತಹ ಸ್ಥಿತಿ ಬಂದಿಲ್ಲ. ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ತೈಲ ಆಮದಿನಲ್ಲಿ ವ್ಯತ್ಯಾಸವಾಗಿದೆ. ಹಣದುಬ್ಬರದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಪ್ರಧಾನಿ ಮೋದಿ ವಿಶ್ವದ ಗಮನ ಸೆಳೆಯುವ ಕೆಲಸ ಮಾಡ್ತಿzರೆ. ಬೆಲೆ ಏರಿಕೆಯನ್ನೂ ಹಂತ ಹಂತವಾಗಿ ಕಡಿಮೆ ಮಾಡುತ್ತೇವೆ ಎಂದರು.