ಮೈಸೂರು: ಮೈಸೂರು ಗೆಳೆಯರ ಬಳಗದ ವತಿಯಿಂದ ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಸಾಹಿತಿ ಮಂಜು ಕೋಡಿ ಉಗನೆ ಅವರ ಸಾಹಿತ್ಯ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕವಿ ಡಾ.ಸಂತೋಷ್ ಚೊಕ್ಕಾಡಿ ಅವರು ಸಾಹಿತಿ ಮಂಜು ಕೋಡಿ ಉಗನೆ ಅವರ ಎರಡು (ಮಾರಿಕೋಳಿ ಮತ್ತು ನಾನು ಮಲ್ಲಿಗೆ ಮತ್ತು ದೇವರು) ಕಾವ್ಯವನ್ನು ಕುರಿತು ಮಾತನಾಡಿ, ಕನ್ನಡ ಕಾವ್ಯ ಪರಂಪರೆಯಲ್ಲಿ ದಲಿತರ ವೇದನೆಯನ್ನು ಸೂಚಿಸುವ, ಪ್ರತಿಬಿಂಬಿಸುವ ಶಕ್ತಿಯನ್ನು ಮಂಜು ಕೊಡಿ ಉಗನೆ ಅವರ ಕವನ ಸಂಕಲನಗಳಲ್ಲಿ ಕಾಣಬಹುದೆಂದು ತಿಳಿಸಿ, ಯಾವ ಧಾವಂತವೂ ಇಲ್ಲದೇ ತಮ್ಮದೇ ಆದ ಶೈಲಿಯಲ್ಲಿ ನಿಧಾನ ಗತಿಯಲ್ಲಿ ತುಳಿತಕ್ಕೊಳಗಾದವರ ನೋವುಗಳನ್ನು ಎಳೆಎಳೆಯಾಗಿ ತಮ್ಮ ಕವಿತೆಗಳಲ್ಲಿ ಹೊರತಂದಿದ್ದಾರೆಂದು ಅಭಿಪ್ರಾಯಿಸಿ, ಒಟ್ಟಾರೆ ಅವರ ಕವನ ಸಂಕಲನಗಳಲ್ಲಿ ಬುದ್ಧ ಹಾಗೂ ಅಂಬೇಡ್ಕರ್ ಅವರ ಜೀವನಾದರ್ಶಗಳ ಕಾವ್ಯ ಮನೋಭೂಮಿಕೆಯ ಹಿನ್ನೆಲೆಯಲ್ಲಿ ರಚಿಸಿರುವುದನ್ನು ಕಾಣಬಹುದೆಂದು ತಿಳಿಸಿದ ಅವರು, ಸಾಹಿತಿಗಳಾದ ಮಂಜು ಕೋಡಿ ಉಗನೆ ಅವರು ಸಹನೆ, ತತ್ವ ಹಾಗೂ ಆದರ್ಶಗಳನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಂಡಿರುವುದನ್ನು ಕಾಣಬಹುದೆಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಮರ್ಶಕ ಡಾ.ಕೆ.ಕುಮಾರ್ ಅವರು ಮಂಜು ಕೋಡಿ ಅಗನೆ ಅವರ ಚಪ್ಪೋಡು ಕಾದಂಬರಿ ಕುರಿತು ಮಾತನಾಡಿ, ದಲಿತರಿಗಾಗಿರುವ ಅನ್ಯಾಯ ಹಾಗೂ ಶೋಷಣೆಯನ್ನು ಕುರಿತು, ದಲಿತರ ಹಾಗೂ ತುಳಿತಕ್ಕೊಳಗಾದವರ ದುಡಿಮೆಯನ್ನು ಕಿತ್ತುಕೊಂಡು ಕುಡಿತಕ್ಕೆ ತಳ್ಳುವ ನೆಲೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಬದುಕಿನ ಪರಿಸ್ಥಿತಿ ಬದಲಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಕಾದಂಬರಿಯಲ್ಲಿ ಕಾಣಬಹುದೆಂದು ಅಭಿಪ್ರಾಯಿಸಿದರು. ಸಾಹಿತಿ ದೇವನೂರು ಮಹದೇವ ಅವರ ಗ್ರಾಮೀಣ ಭಾಷೆಯ ಸೊಗಡಿನ ನಂತರದ ಭಾಷೆ ಎಂದರೆ ಮಂಜು ಕೋಡಿ ಉಗನೆಯವರ ಗ್ರಾಮೀಣ ಭಾಷೆ ಸೊಗಡನ್ನು ಒಟ್ಟಾರೆ ಕೃತಿಗಳಲ್ಲಿ ಕಾಣಬಹುದೆಂದು ತಿಳಿಸಿದರು.
ಮಂಜು ಕೋಡಿ ಉಗನೆಯವರ ಕಥೆಗಳನ್ನು ಕುರಿತು ಡಾ.ಜಯಶಂಕರ ಹಲಗೂರು, ವಿಮರ್ಶಾ ಬರಹಗಳನ್ನು ಕುರಿತು ಚಿಂತಕ ಹೆಚ್.ಎಸ್.ರೇಣುಕಾರಾಧ್ಯ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಅಗ್ರಹಾರ ಕೃಷ್ಣಮೂರ್ತಿ ವಹಿಸಿದ್ದರು.
ಸಾಹಿತಿಗಳಾದ ಮಂಜು ಕೋಡಿ ಉಗನೆ, ವಿಮರ್ಶಕ ಮಹೇಶ್ ಹರವೆ, ಶ್ರೀ ಕೇಟರರ್ಸ್ ಮಾಲೀಕ ಶ್ರೀಧರಮೂರ್ತಿ, ಉಪನ್ಯಾಸಕರಾದ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಹಾಗೂ ತಿಮ್ಮರಾಜು, ಕೊಳ್ಳೇಗಾಲ ಜೆ.ಎಸ್.ಎಸ್. ಕಾಲೇಜಿನ ಪ್ರಾಂಶುಪಾಲ ಮೂಕಳ್ಳಿ ಮಹದೇವಸ್ವಾಮಿ, ಡಾ.ಡಿ.ನಾಗರಾಜು, ಬಾಲಸುಬ್ರಹ್ಮಣ್ಯಂ, ಚೆಲುವೇಗೌಡ, ಬನುಮಯ್ಯ ಕಾಲೇಜಿನ ಉಪನ್ಯಾಸಕ ಮಹದೇವಸ್ವಾಮಿ ಹಾಗೂ ಗೆಳೆಯರ ಬಳಗ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೈಸೂರು ಗೆಳೆಯರ ಬಳಗದ ವತಿಯಿಂದ ಸಾಹಿತಿ ಮಂಜು ಕೊಡಿ ಉಗನೆಯವರನ್ನು ಆತ್ಮೀಯತೆಯಿಂದ ಸನ್ಮಾನಿಸಿ, ಗೌರವಿಸಿದರು.