ಮೈಸೂರು : ಬೆಳೆಯುತ್ತಿರುವ ಬನ್ನೂರು ಪಟ್ಟಣವನ್ನು ಮೇಲ್ದರ್ಜೆಗೇರಿಸಿ, ಭವಿಷ್ಯದಲ್ಲಿ ಉನ್ನತೀಕರಿಸುವ ಉದ್ದೇಶದಿಂದ ಎರಡನೇ ಹಂತದ ಒಳಚರಂಡಿ ಯೋಜನೆ ಕಾಮಗಾರಿಯನ್ನು ಆರಂಭಿಸಲಾಗುತ್ತಿರುವುದಾಗಿ ಶಾಸಕ ಎಂ.ಅಶ್ವಿನ್ ಕುಮಾರ್ ಹೇಳಿದ್ದಾರೆ.
ಬನ್ನೂರು ಪಟ್ಟಣದಲ್ಲಿ ಪುರಸಭೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಡಿ(ಎನ್.ಜಿ. ಟಿ) 4.31 ಕೋಟಿ ರೂ.ಗಳ ವೆಚ್ಚದ ಎರಡನೇ ಹಂತದ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ, ಯೋಜನೆಯ ನೀಲನಕ್ಷೆ ಪರಿಶೀಲಿಸಿ ಮಾತನಾಡಿದ ಅವರು ಕುಡಿಯುವ ನೀರಿನ ಕೊಳವೆ ಸಂಪರ್ಕ ಹಾಳಾಗದಂತೆ ಎಚ್ಚರವಹಿಸಿ ತ್ಯಾಜ್ಯ ನೀರು ಸರಾಗವಾಗಿ ಹೊರ ಹೋಗುವಂತೆ ಪ್ರತಿಯೊಂದು ಮನೆಗೂ ಒಳ ಚರಂಡಿ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದರು.
ಇದೇ ವೇಳೆ ಒಳಚರಂಡಿ ಕಾಮಗಾರಿ ನಿರ್ವಹಣೆಯ ವೇಳೆ ಕುಡಿಯುವ ನೀರಿನ ಕೊಳಾಯಿ ಸಂಪರ್ಕ ತುಂಡಾಗದಂತೆ ಎಚ್ಚರ ವಹಿಸಬೇಕು. ಕಾಮಗಾರಿ ಮುಗಿದ ಬಳಿಕ ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಉಪನಗರದಂತೆ ಅಭಿವೃದ್ಧಿಗೊಳ್ಳಲಿರುವ ಬನ್ನೂರು ಪಟ್ಟಣವನ್ನು ಮೇಲ್ದರ್ಜೆಗೇರಿಸಲು ಹಾಗೂ ಮೂಲಸೌಕರ್ಯಗಳನ್ನು ಉತ್ತಮಗೊಳಿಸಲಿಕ್ಕೆ ಎರಡನೇ ಹಂತದಲ್ಲಿ ಪಟ್ಟಣಕ್ಕೆ ಪೂರ್ಣ ಪ್ರಮಾಣದಲ್ಲಿ ಒಳಚರಂಡಿ ನಿರ್ಮಾಣ ಮಾಡಲು ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮನ್ವಯತೆಯನ್ನು ಕಾಯ್ದುಕೊಂಡು ಒಳಚರಂಡಿ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.