ಮೈಸೂರು: ಪಾರಂಪರಿಕ ಕಟ್ಟಡಗಳಾದ ನಗರದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡ ನೆಲಸಮ ನಿರ್ಧಾರದ ವಿರುದ್ಧ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರ ಸಹಕಾರ ನೀಡಿದರೆ ನಾವೇ ಪುನಶ್ಚೇತನಗೊಳಿಸುತ್ತೇವೆ. ಈ ವಿಚಾರದಲ್ಲಿ ಜಿಲ್ಲಾ ಪಾರಂಪರಿಕ ಸಮಿತಿ ನಿರ್ಧಾರ ಸಮಂಜಸ ಅಲ್ಲ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರಂಪರಿಕ ಸಮಿತಿಯಲ್ಲಿ ಎರಡು ಅಭಿಪ್ರಾಯ ವ್ಯಕ್ತವಾಗಿದೆ. ಸೂಕ್ತ ತಜ್ಞರ ನೇಮಕ ಮಾಡಿ ಪರಿಶೀಲಿಸಿದರೆ ಮಾರುಕಟ್ಟೆ ಪುನಶ್ಚೇತನಗೊಳಿಸಬಹುದು. ರಾಜೇಂದ್ರ ವಿಲಾಸ ಪ್ಯಾಲೇಸ್ ಶಿಥಿಲಾವಸ್ಥೆ ತಲುಪಿತ್ತು. ಅದನ್ನು ನಾವು ಪುನಶ್ಚೇತನ ಮಾಡಿದ್ದೇವೆ. ಪ್ರಯತ್ನ ಮಾಡಿದರೆ ಎಲ್ಲವೂ ಸಾಧ್ಯವಿದೆ. ಮಾರುಕಟ್ಟೆ ಉಳಿಸಿಕೊಳ್ಳುವುದು ಕಷ್ಟವೇನಲ್ಲ ಎಂದು ಹೇಳಿದರು.
ಪಾರಂಪರಿಕ ಕಟ್ಟಡಗಳ ಮೇಲೆ ಎಲ್ಲರಿಗೂ ಒಂದು ಭಾವನೆ ಇದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದುವರಿಯಬೇಕು. ಜನರ ಭಾವನೆಗೆ ಧಕ್ಕೆ ತರುವ ಕೆಲಸ ಆಗಬಾರದು. ಜನತೆಯ ಅಭಿಪ್ರಾಯ ಗೌರವಿಸಿದರೆ ಪ್ರತಿಭಟನೆಗಳು ನಡೆಯುವುದಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಚಾಮುಂಡಿಬೆಟ್ಟದ ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ನಿರ್ಮಿಸಿರುವ ಯದುವಂಶದ 25ನೇ ಮಹಾರಾಜ ಜಯರಾಮರಾಜ ಒಡೆಯರ್ ಪುತ್ಥಳಿಯನ್ನು ಅನಾವರಣ ಮಾಡಲಾಯಿತು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಪ್ರತಿಮೆ ಲೋಕಾರ್ಪಣೆ ಮಾಡಿದರು. ಕೃಷಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಜಿ.ಟಿ.ದೇವೇಗೌಡ, ಚಾಮುಂಡಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಇದ್ದರು. ಶ್ವೇತವರ್ಣದ ಜಯಚಾಮರಾಜ ಒಡೆಯರ್ ಅವರ ಪುತ್ಥಳಿಯನ್ನು ಶಿಲ್ಪಿ ಸೂರ್ಯಪ್ರಕಾಶ್ ರೂಪಿಸಿದ್ದಾರೆ.