ದಂಪತಿಯನ್ನು ಕಟ್ಟಿ ಹಾಕಿ ಚಿನ್ನಾಭರಣ ದರೋಡೆ
ಮೈಸೂರು : ದರೋಡೆಕೋರರ ಗುಂಪೊಂದು ಮನೆಯೊಂದಕ್ಕೆ ನುಗ್ಗಿ ದಂಪತಿಯನ್ನು ಕಟ್ಟಿಹಾಕಿ ಹಣ, ಒಡವೆ, ಮೊಬೈಲ್ ದೋಚಿಕೊಂಡು ಹೋಗಿರುವ ಘಟನೆ ತಾಲ್ಲೂಕಿನ ಅಬ್ಬಳತಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗೋಪಿಮೋಹನ್ ಮತ್ತು ಮಣಿ ದಂಪತಿ ಮನೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ರಾತ್ರಿ 9.30ರ ಸಮಯದಲ್ಲಿ ಮನೆಯ ಹಿಂಬಾಗಿಲಲ್ಲಿ ಕಟ್ಟಿಹಾಕಿದ್ದ ನಾಯಿ ಬೊಗಳುತ್ತಿರುವುದನ್ನು ಗಮನಿಸಿದ ಮನೆಯ ಮಾಲೀಕ ಗೋಪಿಮೋಹನ್ ಅವರು ಹೊರಬಂದು ನೋಡಿದಾಗ ಅವರನ್ನು ತಳ್ಳಿಕೊಂಡು ಹಿಂಬಾಗಿಲ ಮೂಲಕ ಒಳಪ್ರವೇಶಿಸಿದ ದರೋಡೆಕೋರರು ದಂಪತಿಯನ್ನು ಕಟ್ಟಿಹಾಕಿ ಲಾಂಗ್ ಹಾಗೂ ಚಾಕುವಿನಿಂದ ಹೆದರಿಸಿ ಚಿನ್ನ ಹಾಗೂ ಹಣ ನೀಡುವಂತೆ ಕನ್ನಡದಲ್ಲಿ ಕೇಳಿ ನಂತರ ಹಿಂದಿ ಭಾಷೆಯಲ್ಲಿ ಮಾತನಾಡಿಕೊಂಡಿದ್ದಾರೆ.
ಈ ವೇಳೆ ಗೋಪಿಮೋಹನ್ ಅವರ ಕತ್ತಿನಲ್ಲಿದ್ದ 31 ಗ್ರಾಂ ತೂಕದ ಚಿನ್ನದ ಸರ, ಕೈ ಬೆರಳಿನಲ್ಲಿದ್ದ 6 ಗ್ರಾಂ ಚಿನ್ನದ ಉಂಗುರ, ಹೆಂಡತಿ ಕಿವಿಯಲ್ಲಿದ್ದ 4 ಗ್ರಾಂ ಚಿನ್ನದ ಓಲೆ, ಪರ್ಸ್ ನಲ್ಲಿ ಟ್ಟಿದ್ದ 4 ಸಾವಿರ ಹಣ, 3 ಮೊಬೈಲ್, 4 ವಾಚ್ ಗಳನ್ನು ಕಿತ್ತುಕೊಂಡು ಬೀರುವಿನಲ್ಲಿ ತಡಕಾಡಿದಾಗ ಏನೂ ಸಿಗದ ಹಿನ್ನೆಲೆ ಮನೆಯ ಹಿಂಬಾಗಿಲಿನ ದಾರಿಯಿಂದ ಪರಾರಿಯಾಗಿದ್ದಾರೆ. ತಕ್ಷಣ ದಂಪತಿ ಕಿರುಚಾಟ ಆರಂಭಿಸಿದ್ದು, ಎದುರು ಮನೆ ಯುವಕ ವಿನೀತ್ ಎಂಬಾತ ಕಟ್ಟಿಹಾಕಿದ್ದ ದಂಪತಿಯನ್ನು ಬಿಡಿಸಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಮುಂದೆ ಒಂದು ಇನೋವಾ ಕಾರು ನಿಂತಿದ್ದು ಆ ಕಾರಿನಲ್ಲಿ ಚಾಲಕ ಕುಳಿತಿದ್ದು, ಉಳಿದ ನಾಲ್ವರು ಕಾರು ಏರಿ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ
ಘಟನೆ ಸಂಬಂಧ ಗೋಪಿಮೋಹನ್ ಪಿರಿಯಾಪಟ್ಟಣ ಪೊಲೀಸರಿಗೆ ದೂರು ನೀಡಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಆಗಮಿಸಿ ದರೋಡೆಕೋರರ ಶೋಧಕ್ಕೆ ಮುಂದಾಗಿದ್ದಾರೆ.ಕೃತ್ಯ ನಡೆದ ಸ್ಥಳಕ್ಕೆ ಎಸ್ಪಿ ಚೇತನ್, ಹೆಚ್ಚುವರಿ ಎಸ್ಪಿ ಶಿವಕುಮಾರ್, ಪ್ರಭಾರ ಡಿವೈಎಸ್ಪಿ ಯೋಗಾನಂದ, ಇನ್ಸ್ ಪೆಕ್ಟರ್ ಜಗದೀಶ್, ಸಬ್ ಇನ್ಸ್ ಪೆಕ್ಟರ್ ಸದಾಶಿವ ತಿಪ್ಪಾರೆಡ್ಡಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.