ಮೈಸೂರು: ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಹಂಚಿಕೊಳ್ಳುತ್ತಿದ್ದ ವೇಳೆ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದ್ದು, ಮಾಂಸ ಸಹಿತ ವ್ಯಕ್ತಿ ಸಿಕ್ಕಿ ಬಿದ್ದಿದ್ದರೆ ಉಳಿದ ಹನ್ನೊಂದು ಮಂದಿ ಪರಾರಿಯಾಗಿರುವ ಘಟನೆ ಹೆಚ್.ಡಿ.ಕೋಟೆಯ ಯಡಿಯಾಲ ಉಪವಿಭಾಗದ ಮೊಳೆಯೂರು ವಲಯದಲ್ಲಿ ನಡೆದಿದೆ.
ಕೆಬ್ಬೆಪುರ ಎ ಹಾಡಿಯ ಶೇಖರ ಬಿನ್ ಲೇಟ್ ಲಿಂಗಯ್ಯ, ಮಾಸ್ತಿ ಬಿನ್ ಕುಳ್ಳಯ್ಯ, ಕರಿಯ ಬಿನ್ ಬೊಮ್ಮ, ಮಂದಣ್ಣ ಬಿನ್ ಬೊಮ್ಮಯ್ಯ, ಕುಳ್ಳ ಬಿನ್ ಕಾಳ, ಶೇಖರ್ ಬಿನ್ ಬೊಳ, ಕುಳ್ಳ ಬಿನ್ ಚಿಕ್ಕ, ಕರಿಯಪ್ಪ ಬಿನ್ ತುಂಡ, ಕರಿಯಪ್ಪ ಬಿನ್ ಚೆನ್ನ, ದಾಸ ಬಿನ್ ಕಾಳ, ಬಿಳಿಯ ಬಿನ್ ಸಾಣಿ, ಗಣೇಶ ಬಿನ್ ಮಾಸ್ತಿ ಎಂಬುವರು ಸೇರಿಕೊಂಡು ಬೇಟೆಗೆ ತೆರಳಿದ್ದರು.
ಯಡಿಯಾಲ ಉಪವಿಭಾಗದ ಮೊಳೆಯೂರು ಶಾಖೆ ಗಸ್ತಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇವರು ಜಿಂಕೆಯೊಂದನ್ನು ಬೇಟೆಯಾಡಿದ್ದು, ಬಳಿಕ ಮಾಂಸ ಮಾಡಿ ಅದನ್ನು ಹಂಚಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳನ್ನೊಳಗೊಂಡ ತಂಡ ದಾಳಿ ಮಾಡಿದ್ದು ಈ ವೇಳೆ ಶೇಖರ ಸಿಕ್ಕಿ ಬಿದ್ದಿದ್ದು, ಉಳಿದವರು ತಪ್ಪಿಸಿಕೊಂಡಿದ್ದಾರೆ.
ಸ್ಥಳದಲ್ಲಿ ದೊರೆತ ಅಲ್ಯೂಮಿನಿಯಂ ಪಾತ್ರೆ, ಸ್ಟೀಮ್ ದಬರಿ, ಪ್ಲಾಸ್ಟಿಕ್ ಡಬ್ಬ, 570 ಗ್ರಾಂ ಬೇಯಿಸಿದ ಮಾಂಸ, ಹಾಗೂ ಸುಮಾರು ಆರು ಕೆಜಿಯಷ್ಟು ಹಸಿಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಎಚ್.ಡಿ.ಕೋಟೆ ಜೆ ಎo ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಮುಂದುವರೆದಿದೆ ಎಂದು ಮೊಳೆಯೂರು ವಲಯದ ಅರಣ್ಯಾಧಿಕಾರಿ ಪುಟ್ಟರಾಜು ತಿಳಿಸಿದ್ದಾರೆ.