ನಂಜನಗೂಡು : ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು, ಗ್ರಾಪಂ ಸಭೆಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿಯೇ ಸಪ್ತಪದಿ ತುಳಿದು ಸತಿಪತಿಗಳಾಗಿದ್ದಾರೆ. ಹರದನಹಳ್ಳಿಯ ಪ್ರೇಮಿಗಳಾದ ಬಸವರಾಜು(24) ಹಾಗೂ ಸುಚಿತ್ರ(19) ಗ್ರಾಪಂ ಸಭೆಯಲ್ಲಿ ಗ್ರಾಪಂ ಪಿಡಿಓ ನೆರವಿನಿಂದ ಬಾಳಸಂಗಾತಿಗಳಾದವರು.
ಇವರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಆದರೆ ಮದುವೆ ಆಗಲು ಪೋಷಕರ ವಿರೋಧ ಇತ್ತು ಎನ್ನಲಾಗಿದೆ. ಹೀಗಾಗಿ ಪಂಚಾಯಿಗೆ ಆಗಮಿಸಿದ ಪ್ರೇಮಿಗಳು ಪಿಡಿಓ ಮಹದೇವಸ್ವಾಮಿ ಬಳಿ ಮದುವೆ ಮಾಡುವಂತೆ ಮನವಿ ಮಾಡಿದ್ದರು. ಹೀಗಾಗಿ ಪಿಡಿಓ ಪೋಷಕರನ್ನು ಕರೆಯಿಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ಎಲ್ಲರ ಒಪ್ಪಿಗೆ ಮೇರೆಗೆ ಪ್ರೇಮಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಮದುವೆ ಮಾಡಿಸಿದ್ದಾರೆ.
ಹಾಗೆನೋಡಿದರೆ ಈ ಹಿಂದೆ ಪ್ರೇಮಿಗಳ ಮದುವೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತಲ್ಲದೆ, ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೂ ಜೋಡಿಗಳು ಒಂದಾಗಲು ಸಾಧ್ಯವೇ ಆಗಿರಲಿಲ್ಲ.
ಈ ನಡುವೆ ಸೋಮವಾರ ಸಭೆ ನಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯ್ತಿ ಕಚೇರಿ ಪಕ್ಕದ ಮನೆಯಲ್ಲೇ ಪ್ರೇಮಿಗಳ ವಿಚಾರದಲ್ಲಿ ಗಲಾಟೆ ಶುರುವಾಗಿತ್ತು. ಎರಡೂ ಮನೆಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ಮಾತು ಕೇಳದವರಿಗೆ ದಂಡ ವಿಧಿಸಲಾಗಿತ್ತು. ಗಲಾಟೆ ಶಬ್ಧ ಕೇಳಿದ ಪಿಡಿಓ ಮಹದೇವಸ್ವಾಮಿ ಸ್ಥಳಕ್ಕೆ ಧಾವಿಸಿ ಜಗಳದ ಕಾರಣ ತಿಳಿದುಕೊಂಡಿದ್ದಾರೆ. ಒಪ್ಪಿಗೆಗೆ ದಂಡ ಹಾಕುವುದು ಕಾನೂನಿಗೆ ವಿರೋಧ ಎಂದು ಮಹದೇವಸ್ವಾಮಿ ಮುಖಂಡರಿಗೆ ತಿಳಿ ಹೇಳಿದ್ದಾರೆ. ಅಲ್ಲದೆ, ಕಾನೂನಿಗೆ ವಿರುದ್ದವಾಗಿ ನಡೆದುಕೊಳ್ಳಬಾರದೆಂದು ಸಲಹೆ ನೀಡಿದ್ದಲ್ಲದೆ, ಪ್ರೇಮಿಗಳನ್ನ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಕರೆತಂದು ಗ್ರಾಮ ಪಂಚಾಯತಿ ಸದಸ್ಯರ ಸಮ್ಮುಖದಲ್ಲಿ ಹಾರ ಬದಲಿಸುವ ಮೂಲಕ ಮದುವೆ ಮಾಡಿಸಿದ್ದಾರೆ. ಜೊತೆಗೆ ಪ್ರೇಮಿಗಳ ಪೋಷಕರನ್ನೂ ಸಹ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟಾರೆ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಯಬೇಕಿದ್ದ ಸಭೆ ಕಲ್ಯಾಣ ಮಂಟಪವಾಗಿ ಮಾರ್ಪಟ್ಟಿದ್ದು ವಿಶೇಷ. ನೂತನ ವಧುವರರಿಗೆ ವಾರ್ಡ್ ಸದಸ್ಯರೂ ಸಹ ಶುಭಕೋರಿ ಆಶೀರ್ವದಿಸಿದ್ದಾರೆ. ಒಟ್ಟಾರೆ ಈ ಮದುವೆ ವಿಶಿಷ್ಟವಾಗಿ ಎಲ್ಲರ ಗಮನಸೆಳೆದಿದೆ.