ಮೈಸೂರು: ಪಠ್ಯಪುಸ್ತಕಗಳಲ್ಲಿ ಕೋಮುವಾದಿ ಅಂಶಗಳನ್ನು ಸೇರಿಸಲಾಗಿದ್ದು, ಅದನ್ನು ಕೈಬಿಡುವಂತೆ ಆಗ್ರಹಿಸಿ ಭಾರತ್ ವಿದ್ಯಾರ್ಥಿ ಫೆಡರೇಷನ್ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ವಿಜಯಕುಮಾರ್ ಅವರು, ಪಠ್ಯಪುಸ್ತಕದಲ್ಲಿ ಭಗತ್ ಸಿಂಗ್, ನಾರಾಯಣ ಗುರು, ಪೆರಿಯಾರ್ ಹಾಗೂ ಪ್ರಗತಿಪರ ಪಠ್ಯವನ್ನು ಹತ್ತನೇ ತರಗತಿಯ ಪಠ್ಯದಿಂದ ಕೈಬಿಟ್ಟು ಸ್ವಾತಂತ್ರ್ಯ ಚಳುವಳಿಯಿಂದ ದೂರವಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೆ.ಬಿ.ಹೆಗಡೇವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಬಿಜೆಪಿ ಮಾಡಿದ ದೊಡ್ಡ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಠ್ಯಪುಸ್ತಕ ಪುನಃ ಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೆಡಗೇವಾರ್ ಅವರನ್ನು ಬರಹಗಾರರಾಗಿ ಆಯ್ಕೆ ಮಾಡಿದ್ದೇವೆ ಹೊರತು ಅವರ ಸಿದ್ಧಾಂತ ಅಥವಾ ಸಂಘಟನೆಯ ಆಧಾರದ ಮೇಲೆ ಅಲ್ಲ ಎಂದು ತಿಳಿಸಿದ್ದಾರೆ. ಇದು ಕಪಟಿ ಕೋಮುವಾದ ಹರಡಿಸುವ ಹೇಳಿಕೆಯಾಗಿದೆ.
ಇದನ್ನು ವಿದ್ಯಾರ್ಥಿಗಳು ಓದಿದರೆ ನಾಡಿನ ಸೌಹಾರ್ದ ನಾಶವಾಗಲಿದೆ. ಅಷ್ಟಕ್ಕೂ ಹೆಡಗೇವಾರ್ ಯಾವ ಬರಗಾರ ಎಂಬ ಬಗ್ಗೆ ರೋಹಿತ್ ಚಕ್ರತೀರ್ಥ ಅವರೇ ಉತ್ತರಿಸಬೇಕು. ನಾಡಿನಲ್ಲಿ ಅನೇಕ ಬರಹಗಾರರ ಯೋಗ್ಯ ಪಠ್ಯಗಳಿದ್ದರೂ ಹೆಗಡೇವಾರ್ ಭಾಷಣ ಸೇರಿಸುವ ಅನಿವಾರ್ಯವೇನಿತ್ತು. ಯಾವ ಸಾಮಾಜಿಕ ನೆಲೆಯಲ್ಲಿ ಅವರು ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದು ತಿಳಿಸುವಂತೆ ಒತ್ತಾಯಿಸಿದರು.
ಹೆಗಡೇವಾರ್ ಸಂಘದ ಸಂಸ್ಥಾಪಕರಾಗಿ ರೋಹಿತ್ ಚಕ್ರತೀರ್ಥ ಅವರಿಗೆ ಆದರ್ಶವಾಗಿರಬಹುದು. ಆದರೆ ದೇಶದ ಜನತೆಗಲ್ಲ. ಅವರ ಭಾಷಣ ಸಂಘ ಪರಿವಾರಕ್ಕೆ ಆದರ್ಶವೆನಿಸಬಹುದು. ಆದರೆ ನಾಡಿನ ವಿದ್ಯಾರ್ಥಿಗಳಿಗಲ್ಲ. ತಕ್ಷಣವೇ ಪಠ್ಯವನ್ನು ಮೊದಲಿನಂತೆ ಯಥಾವತ್ತಾಗಿ ಜಾರಿ ಮಾಡಬೇಕು. ಹೆಡಗೇವಾರ್ ಭಾಷಣ ಸೇರಿದಂತೆ ಅನೇಕ ಕೋಮುವಾದಿ ಪಠ್ಯಗಳನ್ನು ಕೈಬಿಡುವಂತೆ ಆಗ್ರಹಿಸಿದರು.