ಮೈಸೂರು: ಅಭಯಾರಣ್ಯ ಮತ್ತು ಸಾಮಾನ್ಯ ಕಾಡುಗಳಲ್ಲಿ ಮೃತದೇಹ ಅವಲಂಬಿಸಿ ಬದುಕುತ್ತಿರುವ ಪ್ರಾಣಿ-ಪಕ್ಷಿಗಳಿಗಳ ಆಹಾರದ ದೃಷ್ಟಿಯಿಂದ ಅರಣ್ಯದೊಳಗೆ ಮೃತಪಡುವ ವನ್ಯಜೀವಿಗಳ ಕಳೇಬರವನ್ನು ಹೂಳುವ ಮತ್ತು ದಹಿಸುವ ಬದಲು ಹಾಗೇ ಕೊಳೆಯಲು ಬಿಡುವಂತೆ ಅರಣ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದ ವಿವಿಧ ಭಾಗಗಳಲ್ಲಿರುವ ಅಭಯಾರಣ್ಯ, ಹುಲಿ ಸಂರಕ್ಷಿತ ಪ್ರದೇಶ ಹಾಗೂ ಸಾಮಾಜಿಕ ಅರಣ್ಯಗಳಲ್ಲಿ ಸಹಜ ಮತ್ತು ಅಸಹಜವಾಗಿ ಮೃತಪಡುತ್ತಿದ್ದ ಆನೆ, ಕಡವೆ, ಚಿರತೆ, ಕರಡಿ, ಜಿಂಕೆಯಂತಹ ವನ್ಯಜೀವಿಗಳನ್ನು ಇಲಾಖೆ ಅಧಿಕಾರಿಗಳು ದಹಿಸುವ ಅಥವಾ ಹೂಳುವ ಪರಿಪಾಠವಿತ್ತು. ಈ ಸಂಪ್ರದಾಯಕ್ಕೆ ಅಂತ್ಯ ಹಾಡಿರುವ ಅರಣ್ಯ ಇಲಾಖೆ, ಇನ್ನುಮುಂದೆ ಸತ್ತ ವನ್ಯಜೀವಿಗಳನ್ನು ಹೂಳದೇ, ದಹಿಸದೇ ಹಾಗೆ ಕೊಳೆಯುವಂತೆ ಬಿಡಲು ತೀರ್ಮಾನಿಸಿದೆ.
ಏಕೆ ಈ ನಿರ್ಧಾರ: ವನ್ಯಜೀವಿಗಳು ತಮ್ಮ ಸಾವಿನ ನಂತರವೂ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ಅರಿತ ವನ್ಯಜೀವಿ ತಜ್ಞರು ಕಳೇಬರವನ್ನು ಹೂಳುವ ಮತ್ತು ದಹಿಸುವ ಬದಲು ವನ್ಯಜೀವಿಗಳ ಕಳೇಬರವನ್ನು ಅರಣ್ಯದೊಳಗೆ ಕೊಳೆಯಲು ಬಿಡುವಂತೆ ಇಲಾಖೆಗೆ ಮನವಿ ಮಾಡಿದ್ದರು. ಇದನ್ನು ಗಂಭಿರವಾಗಿ ಪರಿಗಣಿಸಿದ ಇಲಾಖೆ ಅಧಿಕಾರಿಗಳು ಇನ್ನುಮುಂದೆ ಹುಲಿಯನ್ನು ಹೊರತು ಪಡಿಸಿ, ಉಳಿದ ಪ್ರಾಣಿಗಳ ದೇಹವನ್ನು ಹೂಳುವ, ಸುಡುವ ಬದಲು ಹಾಗೆ ಕೊಳೆಯಲು ಬಿಡುವಂತೆ ಏ.೦೬ರಂದು ಆದೇಶ ಹೊರಡಿಸಿದೆ. ಇದರಿಂದ ಪ್ರಾಣಿಗಳ ಮೃತದೇಹ ಅವಲಂಬಿಸಿ ಬದುಕುತ್ತಿರುವ ಪ್ರಾಣಿ-ಪಕ್ಷಿಗಳಿಗಳಿಗೆ ಅನುಕೂಲವಾಗಿದೆ.
ಬೇಟೆಗಾರರು ಗುಂಡುಹಾರಿಸಿ ಸಾಯಿಸಿದ ಆನೆ, ಕಡವೆ ಮತ್ತು ಜಿಂಕೆ, ಚಿರತೆಯಂತಹ ಪ್ರಾಣಿಗಳ ದೇಹದಲ್ಲಿ ಗುಂಡುಗಳನ್ನು ಪತ್ತೆ ಹಚ್ಚುವ ಸಲುವಾಗಿ ಬೆಂಕಿಯಲ್ಲಿ ದಹಿಸಿ ಬಳಿಕ ಗುಂಡುಗಳನ್ನು ಸಂಗ್ರಹಿಸಲಾಗುತ್ತಿತ್ತು. ಇದೇ ಸಂಪ್ರದಾಯ ಮುಂದುವರೆಸಿದ ಅರಣ್ಯ ಇಲಾಖೆ, ಅರಣ್ಯ ಕಾಯ್ದೆ ಜಾರಿ ಬಳಿಕ ಕಾಡುಗಳಲ್ಲಿ ಸಿಗುತ್ತಿದ್ದ ವನ್ಯಜೀವಿಗಳ ಕಳೇಬರವನ್ನು ಭೂಮಿಯಲ್ಲಿ ಹೂಳುವುದು ಅಥವಾ ಸುಡುವುದನ್ನು ಮಾಡುತ್ತಿದ್ದರು. ಇದರಿಂದ ಸತ್ತ ಪ್ರಾಣಿಗಳ ಮಾಂಸವನ್ನೇ ಅವಲಂಭಿಸಿದ್ದ ಜೀವಿಗಳ ಆಹಾರ ಸರಪಳಿ ತುಂಡರಿಸಿದಂತಾಗಿತ್ತು.
ಈ ಆಹಾರ ಸರಪಳಿಯ ಕೊಂಡಿ ನಾಶವಾಗದಂತೆ ವನ್ಯಜೀವಿ ತಜ್ಞರು ಸತ್ತ ಪ್ರಾಣಿಗಳನ್ನು ಹೂಳುವ, ಸುಡುವ ಪರಿಪಾಠವನ್ನು ಕೈಬಿಡುವಂತೆ ಇಲಾಖೆಗೆ ಬಹಳ ವರ್ಷಗಳಿಂದಲೂ ಮನವಿ ಮಾಡುತ್ತಾ ಬಂದಿದ್ದರು. ಕೊನೆಗೂ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.