ಮೈಸೂರು: ಮೈಸೂರಿನ ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್ ವತಿಯಿಂದ ಡಿಸೆಂಬರ್ ಒಳಗೆ 10ಸಾವಿರ ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ನ್ಯೂರೋಜೋನ್ ಮುಖ್ಯಸ್ಥರಾದ ಡಾ. ಹೆಚ್.ವಿ. ಸುಶ್ರುತ್ ತಿಳಿಸಿದರು.
ಮೈಸೂರು ತಾಲ್ಲೂಕು ಮಂಡಕಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್ ಡಾ. ವಿಷ್ಣುಮೂರ್ತಿ ರೇಖಾ ಟ್ರಸ್ಟ್ ಹಾಗೂ ಕರುಣಾ ಟ್ರಸ್ಟ್ ವತಿಯಿಂದ ಥಾರ್ ಪ್ರಾಜೆಕ್ಟ್ ಯೋಜನೆಯಡಿ ಸೇವಾದೃಷ್ಟಿಯಿಂದ ಗ್ರಾಮೀಣಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದು, ಈಗಾಗಲೇ ವೀರಾಜಪೇಟೆ, ಸೋಮವಾರಪೇಟೆ, ಹುಣಸೂರು, ಕಡಕೊಳ, ಸಿಂಧುವಳ್ಳಿಗಳಲ್ಲಿ ಉಚಿತ ಆರೋಗ್ಯ ತಪಾಸಣೆಗಳನ್ನು ನಡೆಸಿದ್ದು, ಪ್ರಾರಂಭವಾದ ಎರಡೂವರೆ ತಿಂಗಳಲ್ಲಿ 1500 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಒಂದು ವರ್ಷದವರೆಗೆ ರೋಗಿಗಳಿಗೆ ಫೋನ್ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
12 ಜನ ನುರಿತ ತಜ್ಞ ವೈದ್ಯರು ಸೇರಿದಂತೆ ೩೫ ಜನರ ತಂಡ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಚಿತವಾಗಿ ಔಷಧಿಯನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮೈಸೂರಿನ 25 ಸ್ಲಂಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುವುಇದು ಎಂದು ಹೇಳಿದ ಅವರು ಗ್ರಾಮೀಣ ಭಾಗದ ಜನರಲ್ಲಿ ಬಿ.ಪಿ. ಮತ್ತು ಸಕ್ಕರೆ ಖಾಯಿಲೆ ಹೆಚ್ಚಾಗಿ ಕಂಡು ಬರುತ್ತಿದ್ದು, ಜನರು ಉದಾಸೀನ ಮಾಡದೆ ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಮಾರ್ಬಳ್ಳಿ ಕುಮಾರ್, ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್ನ ಆಡಳಿತಾಧಿಕಾರಿ ಧನ್ಯಾಸುಶ್ರೂತ ಹಾಜರಿದ್ದರು.