ಕೆ.ಆರ್.ನಗರ: ಪಟ್ಟಣದ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ಶಾಸಕರ ಕಛೇರಿ ಆರಂಭಿಸಲಾಗಿದ್ದು ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಜನತೆ ಪಕ್ಷದ ಕಛೇರಿಗೆ ಮತ್ತು ಮನೆಗೆ ಅಲೆದಾಡುವ ಬದಲು ನೇರವಾಗಿ ಶಾಸಕರ ಕಛೇರಿಗೆ ಬಂದು ಅಹವಾಲು ಸಲ್ಲಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಇರುವ ಸಂದರ್ಭದಲ್ಲಿ ಕಚೇರಿಯಲ್ಲಿ ಕುಳಿತು ಜನತೆಯ ಅಹವಾಲು ಆಲಿಸಲಾಗುತ್ತದೆ ಎಂದು ಭರವಸೆ ನೀಡಿದಲ್ಲದೆ, ವಿಧಾನ ಸಭಾ ಅಧಿವೇಶನ ಮತ್ತಿತರ ಸಂದರ್ಭದಲ್ಲಿ ಕಚೇರಿಯಲ್ಲಿ ಲಭ್ಯವಿಲ್ಲದ ಬಗ್ಗೆ ಮೊದಲೇ ಮಾಹಿತಿ ನೀಡಲಾಗುತ್ತದೆ ಎಂದರು.
ಶಕ್ತಿ ಯೋಜನೆಗೆ ಚಾಲನೆ ನೀಡಿದ ನಂತರ ಸರ್ಕಾರದ ಬಗೆ ಮಹಿಳೆಯರಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಬಸ್ಗಳ ಕೊರತೆಯಿದೆ ಎಂಬ ಕೂಗು ಕೇಳಿ ಬರುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸುವುದರ ಜತೆಗೆ ಖುದ್ದು ಬಸ್ ನಿಲ್ದಾಣದಲ್ಲಿ ಇದ್ದು ಸಮಸ್ಯೆಯನ್ನು ಆಲಿಸಿ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ಆರಂಭಗೊಂಡಿರುವ ಕಾಮಗಾರಿಗಳನ್ನು ಗುತ್ತಿಗೆದಾರರು ಕಳಪೆಯಿಂದ ನಿರ್ವಹಿಸುತ್ತಿದ್ದಾರೆ ಎಂಬ ದೂರು ಬಂದಿದ್ದು ಶೀಘ್ರದಲ್ಲೇ ಸಂಬಂಧ ತಜ್ಞ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗುಣಮಟ್ಟದ ಕಾಮಗಾರಿ ಮಾಡಿಸಲು ಕ್ರಮವಹಿಸುತ್ತೇನೆ ಎಂದ ಶಾಸಕರು ಸಾರ್ವಜನಿಕರ ತೆರಿಗೆ ಹಣದಿಂದ ನಿರ್ವಹಣೆ ಮಾಡುವಂತಹ ಕಾಮಗಾರಿಗಳು ಕಳಪೆ ಎಂದು ಕಂಡು ಬಂದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಡಿ.ರವಿಶಂಕರ್ ಪತ್ನಿ ಸುನೀತಾ, ತಂದೆ ದೊಡ್ಡಸ್ವಾಮೇಗೌಡ, ತಾಯಿ ವನಜಾಕ್ಷಮ್ಮ ಅವರೊಂದಿಗೆ ಕಚೇರಿ ಆರಂಭಿಸಲು ಹೋಮ ಹವನ ನಡೆಸಿ, ಆ ನಂತರ ತಂದೆಯವರಿಂದ ಕಚೇರಿ ಉದ್ಘಾಟಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ಜಿ.ಪಂ. ಮಾಜಿ ಸದಸ್ಯರಾದ ಜಿ.ಆರ್.ರಾಮೇಗೌಡ, ಸಿದ್ದಪ್ಪ, ಜಯರಾಮೇಗೌಡ, ತಾ.ಪಂ. ಮಾಜಿ ಅಧ್ಯಕ್ಷರಾದ ಹಾಡ್ಯಮಹದೇವಸ್ವಾಮಿ ಸೇರಿದಂತೆ ಹಲವು ಮುಖಂಡರು ಇದ್ದರು.