ಮದ್ದೂರು : ಭಾರತೀಯ ಶೈಕ್ಷಣಿಕ ವಾತಾವರಣದಲ್ಲಿ ಹಾಸುಹೊಕ್ಕಾಗಿದ್ದ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಆಪ್ತತತೆಯ ಭಾವನಾತ್ಮಕ ಸಂಬಂಧ ಕ್ಷೀಣಿಸುತ್ತಿದ್ದು, ಪ್ರಸ್ತುತ ದಿನಗಳಲ್ಲಿ ಅವರ ನಡುವೆ ಕೇವಲ ಯಾಂತ್ರಿಕ ಸಂಬಂಧವಷ್ಟೆ ಉಳಿದಿದೆ ಎಂದು ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ವಿಷಾದಿಸಿದರು.
ತಾಲ್ಲೂಕಿನ ವಳಗೆರೆಹಳ್ಳಿಯ ಶ್ರೀಮತಿ ಪ್ರಮೀಳಾ ವೀರಪ್ಪ ಪ್ರೌಢಶಾಲೆಯ ಆವರಣದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸುವರ್ಣ ಗೆಳೆಯರ ಬಳಗ’ದ ವತಿಯಿಂದ ನಡೆದ ಗುರುವಂದನಾ ಹಾಗೂ ಗೌರವ ಸಮರ್ಪಣಾ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರು ಕೇವಲ ಕಲಿಸುವವರು ಮಾತ್ರವಾಗಿರದೆ ಆತ್ಮೀಯ ತಂದೆ, ತಾಯಿ, ಸಹೋದರ, ಸ್ನೇಹಿತ, ಮಾರ್ಗದರ್ಶಕರಾಗಿಯೂ ಇದ್ದಾಗ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವೆ ಗಾಢವಾದ ಭಾವನಾತ್ಮಕ ಸಂಬಂಧವಿರುತ್ತದೆ. ಇದು ಉತ್ತಮ ಕಲಿಕಾ ವಾತಾವರಣ ಸೃಷ್ಟಿಸಲು ಪೂರಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಉತ್ತಮ ಸಂಸ್ಕಾರ ಬೆಳೆಸಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು, ಸಮಾಜಮುಖಿಯಾದ ಬದುಕು ಮಾಡಲು ಕಾರಣವಾಗಿರುವ ಶಾಲೆಯನ್ನು ಯಾರೂ ಮರೆಯಬಾರದು. ಪ್ರತಿಯೊಬ್ಬರು ತಾವು ಓದಿ ಕಲಿತ ಶಾಲೆಯ ಜೊತೆಗೆ ನಿರಂತರ ಸಂಪರ್ಕವಿಟ್ಟುಕೊಂಡು, ಆ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸುವ ಮೂಲಕ ಅಳಿಲು ಸೇವೆ ಮಾಡುವ ಮನಸ್ಸು ಮಾಡಬೇಕು ಎಂದು ಕರೆ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಮಾತನಾಡಿ, ಶೈಕ್ಷಣಿಕ ಕೊರತೆಗಳ ನಡುವೆಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಈಗ ಹಳ್ಳಿಗಳಲ್ಲಿ ಸಹ ಉತ್ತಮ ಶೈಕ್ಷಣಿಕ ಸೌಲಭ್ಯಗಳಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಶಿಸ್ತಿನಿಂದ ವ್ಯಾಸಂಗ ಮಾಡಿ ಹೆತ್ತವರಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ಇಂದು ಸಮಾಜ ಬದಲಾಗುತ್ತಲೇ ಇದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಇದು ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಕೌಶಲಗಳ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡುವ ಗುರಿ ಹೊಂದಿದೆ. ಆದ್ದರಿಂದ, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳನ್ನು ಗಂಭೀರವಾಗಿ ಅಧ್ಯಯನ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.
ಮುಖ್ಯ ಶಿಕ್ಷಕ ಎನ್. ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನ ದಂತ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಬಿ. ರುದ್ರೇಶ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೈಜ್ಞಾನಿಕ ಅಧಿಕಾರಿ ವಿ.ಕೆ. ಶ್ರೀನಿವಾಸ್, ಶಾಲೆಯ ಖಜಾಂಚಿ ಅನೂಜ್ ವಿ. ಸತೀಶ್, ಆಡಳಿತಾಧಿಕಾರಿ ವಿ.ಎಂ. ರವಿ, ಕೆ.ಐ.ಡಿ.ಬಿ. ಅಧೀಕ್ಷಕಿ ವಿ.ಎಸ್. ಶೀಲಾ, ಅರವಿಂದ ಮಿಲ್ಸ್ ಲಿಮಿಟೆಡ್ ನ ಅಸೋಸಿಯೇಟ್ ಮ್ಯಾನೇಜರ್ ವಿ.ಕೆ. ಸದಾನಂದ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ವಿ.ಟಿ. ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.