ಮಂಡ್ಯ: ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ. ಮುಂದೊಮ್ಮೆ ರಾಜಕಾರಣ ಬಿಡಬಹುದು ಆದರೆ ಸ್ವಾಭಿಮಾನ, ಸಿದ್ದಾಂತ ಬಿಡಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪುನರುಚ್ಛರಿಸಿದ್ದಾರೆ.
ಇಂದು ಮಂಡ್ಯದಲ್ಲಿ ಮಾತನಾಡಿದ ಅವರು, ಅಂಬರೀಶ್ ಕುಟುಂಬಕ್ಕೆ ಮಂಡ್ಯ ಜನರು ಸಾಕಷ್ಟು ಪ್ರೀತಿ ಕೊಟ್ಟು ಹರಸಿದ್ದಾರೆ, ಬೆಳೆಸಿದ್ದಾರೆ. ಹೀಗಾಗಿ ನಾನು ಮಂಡ್ಯ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ ಎಂದರು. ಜೆಡಿಎಸ್ ಬಿಜೆಪಿ ಮೈತ್ರಿ ಆಗಿದೆ ಆದರೆ ಕ್ಷೇತ್ರ ಹಂಚಿಕೆ ಇನ್ನೂ ಆಗಿಲ್ಲ. ಈಗ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯೆ ಕೊಡಲ್ಲ. ಈ ವಿಚಾರದಲ್ಲಿ ನಾನು ದುಡುಕಿನ ನಿರ್ಧಾರ ಮಾಡಲ್ಲ. ಮಂಡ್ಯ ಜನ ನನ್ನ ಜೊತೆ ಇದ್ದಾರೆ, ನನಗೆ ಆ ವಿಶ್ವಾಸ ಇದೆ. ಈ ಕ್ಷೇತ್ರ ಬೇಕು, ಆ ಕ್ಷೇತ್ರ ಬೇಕು ಎಂದು ಯಾವ ಪಕ್ಷವನ್ನು ಕೇಳಿಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ನನಗೆ ಯೋಚನೆ ಇಲ್ಲ. ಬೆಂಗಳೂರು ಉತ್ತರ ಆಫರ್ ಕಳೆದ ಚುನಾವಣೆಯಲ್ಲೇ ನಿರಾಕರಿಸಿದ್ದೆ. ಇದನ್ನು ನೂರಾರು ಬಾರಿ ಹೇಳಿದ್ದೇನೆ. ಇನ್ನು ರಕ್ತದಲ್ಲಿ ಬರೆದು ಕೊಡಬೇಕಾ? ಮಂಡ್ಯ ಜಿಲ್ಲೆ ರಾಜಕಾರಣ ಯಾವಾಗಲೂ ಚಾಲೆಂಜಿಂಗ್. ಚಾಲೆಂಜ್ಗೆ ಹೆದರುವ ಸ್ವಭಾವ ನನ್ನದ್ದಲ್ಲ ಎಂದರು.