ಮಂಡ್ಯ: ಮಂಡ್ಯ ಜಿಲ್ಲೆಯ ಜನತೆಯನ್ನು ಜಾತ್ರೆಗೆ ಸ್ವಾಗತಿಸಲು ನಗರಕ್ಕೆ ಆಗಮಿಸಿದ್ದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಯಾತ್ರೆಗೆ ನಗರದ ಸ್ವರ್ಣಸಂದ್ರ ಬಡಾವಣೆಯ ಶ್ರೀ ಶನೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಗಣ್ಯರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಣೆ ಮಾಡಿದರು.
ಪುಷ್ಪಾರ್ಚಜನೆ ನೆರವೇರಿಸಿ ಮಾತನಾಡಿದ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಜ.18 ರಿಂದ 23ರವರೆಗೆ ನಂಜನಗೂಡು ತಾಲ್ಲೂಕಿನ ಸುತ್ತೂರಿನ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದ್ದು ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರಲ್ಲದೆ, ಜಾತ್ರೆಯ ಅಂಗವಾಗಿ ಬೆಳಗ್ಗೆಯಿಂದ ರಾತ್ರಿವರೆಗೂ ಗಾಯನ, ನಾಟಕ, ರಸಮಂಜರಿ, ಯಕ್ಷಗಾನ, ವಚನಗಾಯನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಳೆದ ವರ್ಷ ಸುಮಾರು 6 ಲಕ್ಷ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ವರ್ಷ ಇದಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ ಮಾತನಾಡಿ, ಜ.18ರಂದು ಉತ್ಸವಮೂರ್ತಿಯನ್ನು ಶ್ರೀಮಠದಿಂದ ಕರ್ತೃಗದ್ದುಗೆಗೆ ಬಿಜಯಂಗೈಸಲಾಗುವುದು. 19ರಂದು ಸಾಮೂಹಿಕ ವಿವಾಹ, 20ರಂದು ರಥೋತ್ಸವ, 21ರಂದು ಶ್ರೀಮಹದೇಶ್ವರರ ಕೊಂಡೋತ್ಸವ, ಲಕ್ಷದೀಪೋತ್ಸವ, 22ರಂದು ತೆಪ್ಪೋತ್ಸವ ಹಾಗೂ 23ರಂದು ಅನ್ನಬ್ರಹ್ಮೋತ್ಸವ ನಡೆಯಲಿದೆ ಎಂದು ಜಾತ್ರೆಯ ವಿವರನ್ನು ನೀಡಿದರು.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಮಾತನಾಡಿ, ರಾಜ್ಯಮಟ್ಟದ ಭಜನಾಮೇಳ, ಚಿತ್ರಕಲೆ, ರಂಗೋಲಿ, ಸೋಬಾನೆಪದ ಗಾಯನ, ದೋಣಿ ವಿಹಾರ, ಗಾಳಿಪಟ ಮತ್ತು ಸ್ವಚ್ಛತಾ ಆಂದೋಲನ ಅಭಿಯಾನ ಉದ್ಘಾಟನೆ. ಸಂಜೆ 4ಕ್ಕೆ ಕೃಷಿ ಮೇಳ, ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಮೇಳ ನಡೆಯಲಿರುವ ಜಾತ್ರಾಮಹೋತ್ಸವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ಪ್ರಸಾದ, ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಜೆಡಿಎಸ್ ಮುಖಂಡ ಎಂ.ಆರ್.ಮಂಜುನಾಥ್ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು. ರಥದ ಪ್ರಚಾರ ಸಮಿತಿ ಮುಖ್ಯಸ್ಥ ಪಂಚಾಕ್ಷರಿ, ಶ್ರೀಶನೇಶ್ವರಸ್ವಾಮಿ ಭಕ್ತ ಮಂಡಳಿಯ ಮುಖಂಡರಾದ ಮಾಜಿ ನಗರಸಭೆ ಸದಸ್ಯ ಮಹಾಲಿಂಗು, ರಾಜು, ಚನ್ನೇಗೌಡ ಮತ್ತಿತರರಿದ್ದರು.
ಇದೇ ವೇಳೆ ಮಂಡ್ಯ ನಗರದ ಸ್ವರ್ಣಸಂದ್ರ, ಚಿಕ್ಕೇಗೌಡನದೊಡ್ಡಿ, ಗುತ್ತಲು, ಶ್ರೀಕಾಳಿಕಾಂಬದೇವಾಲಯ, ಎಂ.ಸಿ.ರಸ್ತೆ ಸೇರಿದಂತೆ ನಗರದ ವಿವಿದ ಬಡಾವಣೆಗಳಲ್ಲಿ ಸಂಚರಿಸಿದ ಪ್ರಚಾರ ರಥಯಾತ್ರೆ ಇಂಡುವಾಳು, ಸುಂಡಹಳ್ಳಿ, ತೂಬಿನಕೆರೆ ಮಾರ್ಗವಾಗಿ ಶ್ರೀರಂಗಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಜನರಿಗೆ ಕರಪತ್ರ ನೀಡಿ ಆಹ್ವಾನಿಸಲಾಯಿತು.