ಮಂಡ್ಯ: ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಿ ಭಾರತ ದೇಶವನ್ನು 25 ವರ್ಷಗಳಲ್ಲಿ ವಿಶ್ವ ಗುರು ಮಾಡಬೇಕು ಎಂದು ಭಾರತ ಸರ್ಕಾರದ ವಿದ್ಯುತ್ ಮತ್ತು ಭಾರಿ ಕೈಗಾರಿಕೆಗಳ ರಾಜ್ಯ ಖಾತೆ ಸಚಿವರಾದ ಕ್ರಿಶನ್ ಪಾಲ್ ಗುರ್ಜರ್ ಅವರು ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ದೇಶ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕೈಯಲ್ಲಿರುತ್ತದೆ. ಅವರು ದೇಶದ ಬೆಳವಣಿಗೆಯ ಬಗ್ಗೆ ಇಂದೇ ಚಿಂತಿಸಬೇಕು. ನಮ್ಮ ದೇಶ ವಿಶ್ವದಲ್ಲೇ ಸರ್ವಶ್ರೇಷ್ಠ ಹಾಗೂ ಶಕ್ತಿಶಾಲಿಯಾಗಿ ಹೊರಹೊಮ್ಮಬೇಕು. ಇದಕ್ಕಾಗಿ ಉತ್ತಮ ನಾಯಕರನ್ನು ಆಯ್ಕೆಮಾಡಬೇಕು. ಉತ್ತಮ ನಾಯಕ ತನ್ನ ದೇಶಕ್ಕೆ ಮೊದಲ ಸ್ಥಾನ ನೀಡಬೇಕು ಎಂದರು.
ಪ್ರಧಾನಮಂತ್ರಿ ಮೋದಿಜೀ ಅವರ ಸರ್ಕಾರದಲ್ಲಿ ಯಾವುದೇ ಕಡತವಿದ್ದರೂ 3 ತಿಂಗಳೊಳಗಾಗಿ ವಿಲೇವಾರಿಯಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ಡಿ.ಬಿ.ಟಿ ಮೂಲಕ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುವುದರಿಂದ ಯಾವುದೇ ರೀತಿಯ ಮಧ್ಯವರ್ತಿ ಅಥವಾ ಕಚೇರಿಗೆ ಅಲೆದಾಡಬೇಕಿಲ್ಲ. ನೇರವಾಗಿ ಹಣ ಪಾವತಿಯಾಗುವುದರಿಂದ ಭ್ರಷ್ಟಚಾರಕ್ಕೆ ಮೋದಿಜೀ ಅವರ ಸರ್ಕಾರ ಕಡಿವಾಣ ಹಾಕಿದೆ ಎಂದರು.
ನಿಸರ್ಗ ಎಂಬ ವಿದ್ಯಾರ್ಥಿನಿ ಅಗ್ನಿಪಥ್ ಯೋಜನೆಯನ್ನು 17.5 ರಿಂದ 23 ವರ್ಷ ವಯೋಮಿತಿಯೊಳಗಿನವರಿಗೆ ಮಾತ್ರ ಏಕೆ ಸೀಮಿತವಾಗಿದೆ. ವಯೋಮಿತಿಯನ್ನು ವಿಸ್ತರಿಸಬೇಕು ಎಂದು ಪ್ರಶ್ನಿಸಿದಾಗ. 17.5 ರಿಂದ 23 ವರ್ಷ ವಯೋಮಿತಿಯೊಳಗಿನವರಿಗೆ ಉದ್ಯೋಗದ ಸಮಸ್ಯೆ ಉಂಟಾಗಬಾರದು ಹಾಗೂ ಈ ವಯೋಮಿತಿಯಲ್ಲಿ ಶಿಸ್ತುಬದ್ಧ ತರಬೇತಿ ಪಡೆದರೆ. ಶಿಸ್ತನ್ನು ಅವರು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಆಸ್ತಿಯಾಗುತ್ತಾರೆ. ತರಬೇತಿಯ ನಂತರ ಅವರು ಒಳ್ಳೆಯ ಉದ್ಯೋಗವನ್ನು ಸಹ ಪಡೆಯಬಹುದು ಎಂದರು.
ಸುನೀಲ್ ಕುಮಾರ್ ಎಂಬ ವಿದ್ಯಾರ್ಥಿ ಮಾಜಿ ಸೈನಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ತಂದೆ,ತಾಯಿ ಕಳೆದುಕೊಂಡ ಪ್ರತಿಯೊಬ್ಬ ಮಗುವಿಗೂ ದೊರಕಬೇಕು ಎಂದಾಗ ಸಚಿವರು ಪ್ರತಿಕ್ರಿಯಿಸಿ ಕೋವಿಡ್ನಿಂದ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡವರಿಗೆ ಸರ್ಕಾರದಿಂದ ವಿದ್ಯಾಭ್ಯಾಸದ ವ್ಯವಸ್ಥೆ ಮಾಡಲಾಗಿದೆ ಎಂದರು.
ನಂಜುಂಡ ಎಂಬ ವಿಕಲಚೇತನ ವಿದ್ಯಾರ್ಥಿ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುವ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿ ಹೊಂದಿರುವ ಪಠ್ಯಪುಸ್ತಕವನ್ನು ನೀಡಬೇಕು ಎಂದು ಕೋರಿದಾಗ ಸಚಿವರು ಪ್ರತಿಕ್ರಿಯಿಸಿ ಈ ವಿಷಯನ್ನು ಕೇಂದ್ರ ಸರ್ಕಾರದಲ್ಲಿ ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ನಜಿಯಾ ತಾಜ್ ಎಂಬ ವಿದ್ಯಾರ್ಥಿನಿ ಹಣದುಬ್ಬರದ ಬಗ್ಗೆ ಕೇಳಿದಾಗ, ಕರೋನಾ ಮತ್ತು ರಷ್ಯ- ಉಕ್ರೇನ್ ಯುದ್ಧದಿಂದ ಹಣದುಬ್ಬರದಲ್ಲಿ ತೊಂದರೆಯಾಗಿದ್ದು, ಮುಂದಿನ ದಿನಗಳಲ್ಲಿ ಸರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸೋಮಶೇಖರ್, ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್, ಸಿಫಾಯಿ ಕರ್ಮಚಾರಿಗಳ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ. ಮುಖ್ಯಕಾರ್ಯನಿರ್ವಾಹಕಾಧಿಕಾರಿ ದಿವ್ಯಪ್ರಭು, ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜ, ಉಪವಿಭಾಗಾಧಿಕಾರಿ ಆರ್.ಐಶ್ವರ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.