ಮಂಡ್ಯ: ಆಕಸ್ಮಿಕವಾಗಿ ಅವಘಡಗಳು ಸಂಭವಿಸಿ ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಹಾಗೂ ರಕ್ಷಣಾ ತಂಡ ಆಗಮಿಸುವುದಕ್ಕೂ ಮೊದಲು ಗಾಯಾಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡುವುದು ಅತ್ಯವಶ್ಯಕ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅವರು ತಿಳಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯ ಪಡೆ, ನೆಹರು ಯುವ ಕೇಂದ್ರ, ಎನ್.ಸಿ.ಸಿ ಘಟಕ, ಪಿ.ಇಎಸ್ ಕಲಾ ವಾಣಿಜ್ಯ ವಿಜ್ಞಾನ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಮಹಿಳಾ ಸರ್ಕಾರಿ ಕಾಲೇಜು ಇವರ ಸಹಯೋಗದಲ್ಲಿ ನೆಹರು ಯುವ ಕೇಂದ್ರದ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಯಾವಾಗ ಬೇಕಾದರೂ ವಿಕೋಪಗಳು ಸಂಭವಿಸುವ ಸಾಧ್ಯತೆ ಇದೆ. ಪ್ರಾಕೃತಿಕ ಅಥವಾ ಮಾನವ ನಿರ್ಮಿತ ವಿಕೋಪಗಳು ಆದಾಗ ಅವುಗಳನ್ನ ನಿರ್ವಹಣೆ ಮಾಡಲು ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿದುಕೊಂಡಿರಬೇಕು. ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಾಗ, ನಾಲೆಗಳಲ್ಲಿ ಯಾರಾದರೂ ಮುಳುಗಿದಾಗ, ಬಸ್ ಅಪಘಾತ ಸಂಭವಿಸಿದಾಗ, ಅಪಘಾತಕ್ಕೆ ಒಳಗಾದ ವ್ಯಕ್ತಿಗಳನ್ನು, ಯಾವುದೇ ತಪ್ಪುಗಳನ್ನು ಮಾಡದೆ ಜೀವ ಉಳಿಸಲು ಎಚ್ಚರ ವಹಿಸಬೇಕಾದ ಕೆಲವು ವಿಧಾನಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಎನ್ ಡಿ ಆರ್ ಎಫ್ ತಂಡದವರು ವಿಪತ್ತು, ಅವಘಡ, ಅಪಘಾತ ಸಂಭವಿಸಿದಾಗ ನಾವು ಎನು ಮಾಡಬೇಕೆಂದು ಪ್ರಾತ್ಯಕ್ಷಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಎನ್ ಡಿ ಆರ್ ಎಫ್ ಇನ್ಸ್ಪೆಕ್ಟರ್ ಶಿವಕುಮಾರ್, ಆಕಾರ್ಶ್, ಎಂ.ಎಸ್ ಮಠಪತಿ, ಸಂದೀಪ್ ಸಿಂಗ್, ಮಹಿಳಾ ಕಾಲೇಜಿನ ಉಪನ್ಯಾಸಕಿ ಕೆಂಪಮ್ಮ, ಕೆ.ಪಿ ಅರುಣ ಕುಮಾರಿ, ವಿಪತ್ತು ನಿರ್ವಹಣಾ ಪರಿಣಿತರಾದ ಪುನೀತ್, ಸೇರಿದಂತೆ ಇನ್ನಿತರರು ಇದ್ದರು.