ಮಂಡ್ಯ: ರ್ಸಾಜನಿಕರ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಡಳಿತದಿಂದ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.
ಪಾಂಡವಪುರ ತಾಲ್ಲೂಕಿನ ತಾಳಶಾಸನ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಂದಾಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಜಿಲ್ಲಾಧಿಕಾರಿಗಳ ಅಧಿಕಾರದ ವ್ಯಾಪ್ತಿಗೆ ಬರುವ 54 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಇದು ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಜಿಲ್ಲೆಯ ಪ್ರತಿ ತಾಲ್ಲೂಕಿಗೆ 8 ಜನರನ್ನು ನೇಮಕ ಮಾಡಲಾಗುವುದು. ಪಾಂಡವಪುರ ತಾಲ್ಲೂಕು ಕಚೇರಿಯಲ್ಲಿ ಇರುವ ನ್ಯೂನತೆಗಳನ್ನು ಪರಿಶೀಲಿಸಿ ಪರಿಹರಿಸಲಾಗುವುದು. ಸರ್ಕಾರ ಪಾಂಡವಪುರ ತಾಲ್ಲೂಕಿಗೆ ಹೊಸ ತಹಶೀಲ್ದಾರ್ ಅವರನ್ನು ಸಹ ನಿಯೋಜಿಸಿದೆ ಎಂದರು.
ಕನಕನಮರಡಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಇಲಾಖೆಗಳಿಂದ ನಿರಾಕ್ಷೇಪಣ ಪತ್ರ ಪಡೆದು ನಂತರ ಪರವಾನಗಿ ನೀಡಲಾಗಿದೆ. ಗಣಿಗಾರಿಕೆಯ ಡ್ರೋಣ್ ಸರ್ವೆ ಈ ತಿಂಗಳ ಅಂತ್ಯದಲ್ಲಿ ಪ್ರಾರಂಭವಾಗಲಿದೆ. ಸರ್ವೆಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ ನಡೆಸಲಾಗುವುದು. ಕನಕನಮರಡಿಗೆ ಫೆ. 15ಅಥವಾ 16 ರಂದು ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ. ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಅಂಬೇಡ್ಕರ್ ಭವನ, ಆಶ್ರಯ ನಿವೇಶನ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದು ಪರಿಶೀಲಿಸಿ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.
ದೊಡ್ಡ ಬ್ಯಾಡರಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕ ಪ್ರಾರಂಭವಾಗಿದ್ದು, ಕಸ ಸಂಗ್ರಹಿಸುವ ವಾಹನಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಅವರು ಚಾಲನೆ ನೀಡಿ ಮಾತನಾಡಿ,. ಗ್ರಾಮದ ಅಭಿವೃದ್ಧಿಗೆ ಪೂರಕವಾಗಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಜನಪ್ರಿಯ ಕಾರ್ಯಕ್ರಮವಾಗಿರುತ್ತದೆ. ಜಿಲ್ಲಾಧಿಕಾರಿಗಳು ಹಳ್ಳಿಗೆ ಬಂದರೆ ಇಡೀ ಜಿಲ್ಲಾಡಳಿತವೇ ಬರುತ್ತದೆ. ಅಲ್ಲಿಯ ಜನರ ಸಮಸ್ಯೆ ಆಲಿಸುತ್ತದೆ ಎಂದರು.
ಸ್ವಚ್ಛತೆಗೆ ಆದ್ಯತೆ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆಗೆ ಆದ್ಯತೆ ನೀಡಿ ಪ್ರತಿ ಶನಿವಾರ ಸ್ಚಚ್ಛ ಶನಿವಾರ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಮಹಿಳೆಯರೇ ಕಸ ಸಂಗ್ರಹಿಸುವ ವಾಹನದ ಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ವಾಹನ ಚಾಲನಾ ತರಬೇತಿ ಸಹ ನೀಡಲಾಗಿದೆ. ಗ್ರಾಮಸ್ಥರು ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡಿ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ವತಿಯಿಂದ ನರೇಗಾ ಹಾಗೂ ವಿವಿಧ ಯೋಜನೆಯಡಿ ದೊಡ್ಡ ಬ್ಯಾಡರಳ್ಳಿ ವ್ಯಾಪ್ತಿಯ ಶಾಲೆಗಳಲ್ಲಿ ಆಟದ ಮೈದಾನ, ಶೌಚಾಲಯ, ಗ್ರಾಮದಲ್ಲಿ ಚರಂಡಿ ನಿರ್ಮಾಣ, ಡಿಜಿಟಲ್ ಗ್ರಂಥಾಲಯ ಮುಂತಾದ ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗುತ್ತಿದೆ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮೀಣ ಜನರು ಜಿಲ್ಲಾ ಕೇಂದ್ರಕ್ಕೆ ತರಳಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡುವುದು ಕಷ್ಟಕರ. ತಾಳಶಾಸನ 1200 ಜನಸಂಖ್ಯೆ ಹೊಂದಿರುವ ಪುಟ್ಟ ಗ್ರಾಮ. ಜಿಲ್ಲಾಧಿಕಾರಿಗಳ ಹಳ್ಳಿಗಳ ಕಡೆ ಕಾರ್ಯಕ್ರಮದಿಂದ ಇಂದು ಇಲ್ಲಿನ ಜನರು ಜಿಲ್ಲಾಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಿ ತಮ್ಮ ಕುಂದು ಕೊರತೆ ಕುರಿತು ಅರ್ಜಿ ಸಲ್ಲಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ವಿಧವಾ ವೇತನ,ಮನಸ್ವಿನಿ, ಆರೋಗ್ಯ ಇಲಾಖೆ ವತಿಯಿಂದ ತಾಯಿ ಕಾರ್ಡ್ ವಿತರಣೆ, ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಮಂಜೂರು ಪತ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಸುಕನ್ಯ ಸಮೃದ್ಧಿ ಯೋಜನೆ ಪಾಸ್ ಬುಕ್ ವಿತರಣೆ, ಮಕ್ಕಳಿಗೆ ಅನ್ನ ಸೇವನೆ ಹಾಗೂ ಗಭೀರ್ಣಿಯರಿಗೆ ಸೀಮಂತ, ರೇಷ್ಮೆ ಇಲಾಖೆಯಿಂದ ಪವರ್ ವೀಡರ್, ಬ್ಯಾಟರಿ ಆಪರೇಟಡ್ ಸ್ಪ್ರೇಯರ್, ಕೃಷಿ ಇಲಾಖೆಯಿಂದ ಮೇವು ಕತ್ತರಿಸುವ ಯಂತ್ರ ವಿತರಿಸಲಾಯಿತು.