ಮದ್ದೂರು: ಕೃಷಿಕೂಲಿಕಾರಿಂದ ರಾಜ್ಯಮಟ್ಟದ ಪಾದಯಾತ್ರೆಯನ್ನು ಫೆ.6 ರಿಂದ 8 ರವರೆಗೆ ಹಮ್ಮಿಕೊಂಡಿರುವುದಾಗಿ ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ತಿಳಿಸಿದರು.
ಮದ್ದೂರು ತಾಲ್ಲೂಕು ಯಲಾದಹಳ್ಳಿ ಗ್ರಾಮದಲ್ಲಿ ಕೃಷಿ ಕೂಲಿಕಾರರ ಸಂಘದ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಫೆ.6 ರಂದು ಶಿವಪುರ ಸತ್ಯಾಗ್ರಹ ಸೌಧದಿಂದ ವಿಧಾನ ಸೌಧದವರೆಗೆ ತೆರಳುವ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕೇರಳ, ತಮಿಳುನಾಡು, ತ್ರಿಪುರ ರೀತಿಯಲ್ಲಿ ಕೃಷಿಕೂಲಿಕಾರರಿಗೆ ಕಲ್ಯಾಣ ಮಂಡಳಿ ನೀಡಬೇಕು. ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡಬೇಕು. ನಿವೇಶನ ಇಲ್ಲದವರಿಗೆ ನಿವೇಶನ ನೀಡಬೇಕು. ಮತ್ತು ಸನ್ಮಾನ ಕಲ್ಪಿಸಬೇಕೆಂದು ಒತ್ತಾಯಿಸಿ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಭಾಗ್ಯಜ್ಯೋತಿ, ಕುಠೀರಜ್ಯೋತಿ, ದೀನ್ದಯಾಳ್, ಸೌಭಾಗ್ಯ ಬೆಳಕು ಜ್ಯೋತಿಗಳಿಗೆ ಪ್ರತೀ ತಿಂಗಳು ಉಚಿತವಾಗಿ 100 ಯೂನಿಟ್ ವಿದ್ಯುತ್ ನೀಡಬೇಕು. ಸಂಧ್ಯಾ ಸುರಕ್ಷಾ, ಅಂಗವಿಕಲತೆ, ವಿಧವಾ ವೇತನ, ಮಾಶಾಸನವನ್ನು 2 ಸಾವಿರ ರೂ ಹೆಚ್ಚಳ ಮಾಡಬೇಕು. ಕೃಷಿಕೂಲಿಕಾರರು ಉಪಕಸುಬು ಮಾಡಲು ಕನಿಷ್ಟ 2 ಲಕ್ಷ ಸಾಲ ನೀಡಬೇಕು. ಉದ್ಯೋಗ ಖಾತರಿಯಡಿ 600ರೂ ಕೂಲಿ ನೀಡಿ, 200 ದಿನ ಕೆಲಸ ನೀಡಬೇಕು. ಜಲಜೀವನ್ ಮೀಟರೀಕರಣವನ್ನು ವಾಪಸ್ ಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳನ್ನು ಭೇಟಿಮಾಡಲು ವಿಧಾನಸೌಲಕ್ಕೆ ತೆರಳಲಾಗುತ್ತಿದೆ. ಹಾಗಾಗಿ 2 ಸಾವಿರಕ್ಕೂ ಹೆಚ್ಚು ಕೂಲಿಕಾರರು ಪಾದಯಾತ್ರೆಯಲ್ಲಿ ಹಮ್ಮಿಕೊಳ್ಳಲಿದ್ದಾರೆ. ನಮ್ಮ ಹೋರಾಟಕ್ಕೆ ಎಲ್ಲರೂ ಕೈಜೋಡಿಸಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಇದೇ ವೇಳೆ ಕೃಷಿಕೂಲಿಕಾರರ ಸಂಘದ ತಾಲ್ಲೂಕು ಕಾರ್ಯದರ್ಶಿ ಟಿ.ಪಿ.ಅರುಣ್ಕುಮಾರ್, ತಾಲ್ಲೂಕು ಅಧ್ಯಕ್ಷೆ ಅನಿತಾ, ವಸಂತಮ್ಮ, ಗಾಳಿಹೊನ್ನಯ್ಯ, ಶೋಭಾ, ಭಾಗ್ಯ, ಬೋರೇಗೌಡ, ನಾಗೇಂದ್ರ, ಪವಿತ್ರ, ರಾಜಣ್ಣ, ಚಿಕ್ಕಸಿದ್ದಯ್ಯ, ಮಂಜುಳಾ ಸೇರಿದಂತೆ ಹಲವರಿದ್ದರು.