ಮಂಡ್ಯ: ಕಾವೇರಿ ಪ್ರಾಧಿಕಾರದ ಆದೇಶಕ್ಕೆ ರಾಜ್ಯ ಸರ್ಕಾರ ಮಣಿದಿದ್ದು, ಕೆಆರ್ಎಸ್ ಮತ್ತು ಕಬಿನಿ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸಲಾಗಿದೆ. ಎರಡು ಡ್ಯಾಂಗಳಿಂದ 3,834 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಕಳೆದ ದಿನವಷ್ಟೇ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನಿರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿತ್ತು. CWMA ಆದೇಶವನ್ನು ಪಾಲನೆ ಮಾಡಿರುವ ರಾಜ್ಯ ಸರ್ಕಾರ ನೀರನ್ನು ಬಿಡುಗಡೆ ಮಾಡಿದೆ.
ಕೆಆರ್ಎಸ್ ಡ್ಯಾನಿಂದ 2,171 ಕ್ಯೂಸೆಕ್ ಬಿಡುಗಡೆ ಮಾಡಿದೆ. ಕಬಿನಿ ಜಲಾಶಯದಿಂದ 1,663 ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ. ಎರಡು ಡ್ಯಾಂಗಳಿಂದ ಒಟ್ಟು 3,834 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಉಳಿದ 1,166 ಕ್ಕೂ ಅಧಿಕ ಕ್ಯೂಸೆಕ್ ನೀರು ಮಳೆಯಿಂದ ಹರಿಯುತ್ತಿದೆ. ಕಳೆದ ದಿನ ಕಾವೇರಿ ಸುತ್ತಮುತ್ತದ ಪ್ರದೇಶದಲ್ಲಿ ಮಳೆಯಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗಿದೆ.