ಭಾರತೀನಗರ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕ್ಷೀಣವಾಗುತ್ತಿರುವುದು ಎಚ್ಚರಿಕೆ ಗಂಟೆಯಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕಿ ಡೆಲಿಸ್ ಮೆರಿನಾ ಹೇಳಿದರು.
ಕರಡಕೆರೆ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ತುಮಕೂರು ಸಿದ್ದಗಂಗಾ ಆಯಿಲ್ ಅಂಡ್ ಬಯೋ ಇಂಡಸ್ಟ್ರೀಸ್ ಕಂಪೆನಿ ವತಿಯಿಂದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದಿ. ಕೆ.ಸಿ. ಪ್ರಕಾಶ್ ಸ್ಮರಣಾರ್ಥ ಉಚಿತ ನೋಟ್ ಬುಕ್ ವಿತರಣೆ ಮಾಡಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳನ್ನು ಮುಚ್ಚುವುದು ತುಂಬಾ ಸುಲಭದ ಕೆಲಸ. ಆದರೆ ಶಾಲೆ ತೆರೆಯುವುದು ತುಂಬಾ ಕಷ್ಟಕರ ಕೆಲಸ. ಸರ್ಕಾರಿ ಶಾಲೆಗಳು ಗ್ರಾಮದಲ್ಲಿ ಕಲಿತ ಪ್ರತಿಯೊಬ್ಬರ ದಾಖಲಾತಿ ನಿರ್ವಹಣೆ ಮಾಡುವುದರ ಮೂಲಕ ನಾಡಕಚೇರಿಯ ಕೆಲಸವನ್ನು ಮಾಡುತ್ತಿದೆ. ಶಾಲೆ ಮುಚ್ಚಿದರೆ ನಿಮ್ಮ ದಾಖಲಾತಿಗಳು ಕೂಡ ಬಿಇಒ ಕಚೇರಿಗೆ ಹಸ್ತಾಂತರವಾಗುತ್ತವೆ. ಮುಂದೆ ಏನಾದರೊಂದು ದಾಖಲಾತಿ ಅವಶ್ಯಕವಾದಾಗ ನೀವು ತಾಲ್ಲೂಕು ಕೇಂದ್ರಕ್ಕೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಉತ್ತಮ ಶಿಕ್ಷಣ ಖರ್ಚಿಲ್ಲದೇ ನಮ್ಮ ಕೂಗಳತೆಯ ದೂರದಲ್ಲಿಯೇ ಇದೆ. ಮಕ್ಕಳ ಪ್ರಗತಿಯನ್ನು ಹತ್ತಿರದಲ್ಲೇ ಕಣ್ಣಾರೆ ನೋಡಬಹುದಾಗಿದೆ. ಹಾಗಾಗಿ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಅಭಿವೃದ್ದಿ ಮಾಡುವುದರ ಮೂಲಕ ಉತ್ತಮ ಕಲಿಕೆಗೆ ನಾಂದಿ ಹಾಡಬೇಕು. ದಾನಿಗಳು ಕೊಡುವ ಕೊಡುಗೆಗಳಿಗೂ ಬೆಲೆ ಇದೆ. ಅದರ ಹಿಂದೆ ತ್ಯಾಗ ಪರಿಶ್ರಮ ಇದೆ. ಇದರ ಹಿಂದಿನ ಉದ್ದೇಶ ಗುಣಾತ್ಮಕ ಶಿಕ್ಷಣ ಪಡೆದು ಗುಣಾತ್ಮಕ ಮಕ್ಕಳು ಹೊರಬರಬೇಕು ಎಂದರು.
ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ, ಸುಧಾಮೂರ್ತಿ ನಗರ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷೆ ವಸಂತಾ, ರೋಟರಿ ಮಾಜಿ ಅಧ್ಯಕ್ಷ ಮೆಣಸಗೆರೆ ಮಧುಸೂದನ್, ಕೀರ್ತಿ ಕೆ.ಸಿ. ಪ್ರಕಾಶ್, ಶಿಕ್ಷಕ ಗೋಪನಹಳ್ಳಿ ರವಿ, ಗ್ರಾ.ಪಂ ಸದಸ್ಯ ಕೆ.ಸಿ. ಸುರೇಂದ್ರ, ಜ್ಯೋತಿ ಯೋಗೇಶ್, ಎಸ್ಡಿಎಂಸಿ ಅಧ್ಯಕ್ಷ ಬೋರೇಗೌಡ, ದೇವರಹಳ್ಳಿ ನಂದೀಶ, ಮುಖಂಡ ಕುಳ್ಳೇಗೌಡ, ದಸಂಸ ತಾಲ್ಲೂಕು ಸಂಚಾಲಕ ಗುಡಿಗೆರೆ ಬಸವರಾಜು, ಅಂಬರಹಳ್ಳಿ ಸ್ವಾಮಿ ಇದ್ದರು.