ಮಂಡ್ಯ: ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣಾ ಕೌಶಲ್ಯಗಳು ಅವಶ್ಯಕವಾಗಿದ್ದು, ಪ್ರತಿಯೊಬ್ಬರು ಸ್ವಯಂ ರಕ್ಷಣಾ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್. ಅಶ್ವತಿ ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕರ್ನಾಟಕ ರಾಜ್ಯ ಕರಾಟೆ ಸಂಘ (ನೋಂದಣಿ) ಇವರು ಆಯೋಜಿಸಿದ್ದ ರಕ್ಷಾ ಸ್ವರಕ್ಷಣೆ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ, ಬ್ರುಸ್ಲಿ ಹೇಳಿರುವಂತೆ ಬಿ ಲೈಕ್ ವಾಟರ್ ಅಂದರೆ ನಾವು ನೀರಿನಂತೆ ಇರಬೇಕು. ನೀರು ಹರಿಯುವ ಸಂದರ್ಭದಲ್ಲಿ ಹಲವಾರು ತೊಡಕುಗಳನ್ನು ಲೆಕ್ಕಿಸದೇ ಹರಿಯುತ್ತದೆ, ಅದೇ ರೀತಿ ನಾವು ಸಹ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಇದಕ್ಕೆ ಸನ್ನದ್ದರಾಗಲು ಸ್ವಯಂ ರಕ್ಷಣಾ ಕೌಶಲ್ಯಗಳ ತರಬೇತಿ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಮಾನಸಿಕ ಸಾಮರ್ಥ್ಯ ಸದೃಢವಾಗಿರಬೇಕು. ಎಷ್ಟೇ ಅಡೆತಡೆಗಳು ಬಂದರು ಎದುರಿಸಿ ಮುನ್ನುಗ್ಗುವ ಛಲವಿರಬೇಕು. ಜೀವನದಲ್ಲಿ ನಿಗದಿ ಮಾಡಿಕೊಂಡಿರುವ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಅಭ್ಯಾಸಗಳನ್ನು ನಡೆಸಬೇಕು ಎಂದರು.
ಗೌರವಯುತ ಜೀವನಕ್ಕೆ ಮೌಲ್ಯಗಳು ಅತ್ಯಗತ್ಯವಾಗಿದ್ದು, ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಹಂತದಲ್ಲೇ ರೂಡಿಸಿಕೊಂಡು ಸಮಾಜದಲ್ಲಿ ಎಲ್ಲಾರಿಗೂ ಮಾದರಿಯಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.