ಮಂಡ್ಯ: ಪೂರ್ವ ಮುಂಗಾರು ರಾಜ್ಯದಾದ್ಯಂತ ಅಲ್ಲಲ್ಲಿ ಸುರಿದಿದ್ದು, ಕೆಲವರಿಗೆ ಹಾನಿಯನ್ನು ಮಾಡಿದೆ. ಒಮ್ಮೆಲೆ ಸುರಿದ ಮಳೆ ಮತ್ತು ಗಾಳಿಗೆ ಹಲವು ಮನೆಗಳಿಗೆ ಹಾನಿಯಾಗಿದ್ದರೆ, ರೈತರು ಬೆಳೆದಿದ್ದ ಬಾಳೆ, ಜೋಳ ನೆಲ ಕಚ್ಚಿದೆ.
ಸಾಮಾನ್ಯವಾಗಿ ಈ ವೇಳೆಗೆ ಮಳೆ ಬರುವುದು ಮಾಮೂಲಿ. ಆದರೆ ಮಳೆ ರಭಸವಾಗಿ ಸುರಿಯುವುದಲ್ಲದೆ, ಗಾಳಿ ಬೀಸುವುದರಿಂದ ರೈತರು ಕಷ್ಟ ಪಟ್ಟು ಬೆಳೆಸಿದ ಬೆಳೆಗಳು ನೆಲ ಕಚ್ಚುತ್ತಿವೆ. ಇನ್ನು ಅಲ್ಲಲ್ಲಿ ಮಳೆ ಗಾಳಿಗೆ ಮರಗಳು ಮುರಿದು ಬೀಳುವುದು, ಮನೆಯ ಛಾವಣಿ ಹಾರಿ ಹೋಗುವುದು ಸಾಮಾನ್ಯವಾಗಿದ್ದು, ನಷ್ಟಗೊಂಡ ಬಡವರು ಪರದಾಡುವಂತಾಗಿದೆ.
ಬಹಳಷ್ಟು ಕಡೆ ಮಳೆಯಿಂದ ಅನಾಹುತವಾದರೆ ಜಿಲ್ಲಾಡಳಿತ ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವುದನ್ನು ಅರಿತು ಖುದ್ದು ತಾವೇ ಸ್ಥಳಕ್ಕೆ ತೆರಳಿ ಬಡವರ ಸಂಕಷ್ಟವನ್ನು ಅರಿಯುವ ಕೆಲಸ ಮಾಡುತ್ತಿದ್ದು, ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಸಾಕಷ್ಟು ಹಾನಿಯಾಗಿತ್ತು. ಹೀಗಾಗಿ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ಬುಧವಾರ ಭೇಟಿ ನೀಡಿದ್ದು, ಹಾನಿಯ ಕುರಿತಂತೆ ಪರಿಶೀಲನೆ ನಡೆಸಿದರು.
ಮಾಡುವಿನಕೋಡಿ ಗ್ರಾಮದಲ್ಲಿ 80ಕ್ಕೂ ಹೆಚ್ಚು ತೆಂಗಿನಮರಗಳಿಗೆ ಹಾನಿಯಾಗಿದ್ದು, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸುವಂತೆ ಸೂಚಿಸಿದರು. ಅಕ್ಕಿಹೆಬ್ಬಾಳು ಗ್ರಾಮದಲ್ಲಿ 2 ಮನೆಗಳಿಗೆ ಹಾನಿಯಾಗಿದ್ದು ನಿಯಮಾನುಸಾರ ಪರಿಶೀಲನೆ ನಡೆಸಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿಗಳೊಂದಿಗೆ ತಹಶೀಲ್ದಾರ್ ಎಂ.ವಿ.ರೂಪ ಇದ್ದರು. ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರ ಕಾರ್ಯ ಚಟುವಟಿಕೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.