ನಂಜನಗೂಡು: ಎಲ್ಲರೂ ಸುಗ್ಗಿಹಬ್ಬ ಸಂಕ್ರಾಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದರೆ ತಾಲೂಕಿನ ಕಪ್ಪಸೋಗೆ ಗ್ರಾಮದ ರೈತನೊಬ್ಬ ಕಣ್ಣೀರಿಡುವಂತಾಗಿದೆ. ಈತ ಬೆಳೆದಿದ್ದ ಭತ್ತದ ಕಣಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
ಕಪ್ಪಸೋಗೆ ಗ್ರಾಮದ ರೈತ ತಿಮ್ಮನಾಯಕ ಭತ್ತದ ಬೆಳೆಯನ್ನು ಕಳೆದುಕೊಂಡವರಾಗಿದ್ದಾರೆ. ಇವರು ತಮ್ಮ ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತವನ್ನು ಕೊಯ್ಲು ಮಾಡಿ ತಂದು ಕಣದಲ್ಲಿ ಶೇಖರಿಸಿಟ್ಟಿದ್ದರು. ಕಳೆದ ಮೂರು ದಿನಗಳ ಹಿಂದೆ ಭತ್ತವನ್ನು ಕಟಾವು ಮಾಡಿ ಒಕ್ಕಣೆ ಮಾಡಲು ಕಣದಲ್ಲಿ ಶೇಖರಿಸಿಟ್ಟಿದ್ದರು.
ಆದರೆ ಶುಕ್ರವಾರ ತಡರಾತ್ರಿಗಳು ಬೆಂಕಿ ಹಚ್ಚಿದ್ದು ಭತ್ತ ಸಹಿತ ಹುಲ್ಲು ಹೊತ್ತಿ ಉರಿದಿದೆ. ಪರಿಣಾಮ ಸಂಪೂರ್ಣ ನಾಶವಾಗಿದೆ. ಕಷ್ಟಪಟ್ಟು ದುಡಿದ ಬೆಳೆ ಬೂದಿಯಾಗಿದ್ದು, ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ರೈತ ತಿಮ್ಮನಾಯಕ ಅವರನ್ನು ಕಾಡಿದೆ.
ಬೆಂಕಿ ಹಚ್ಚಿದ ಕಿಡಿಗೇಡಿಗಳು ಯಾರು? ಏತಕ್ಕಾಗಿ ಬೆಂಕಿ ಹಚ್ಚಿದ್ದಾರೆ ಎಂಬುದು ಆರೋಪಿಗಳ ಬಂಧನವಾದ ಬಳಿಕ ಗೊತ್ತಾಗಬೇಕಿದೆ. ದ್ವೇಷದಿಂದ ಈ ಕೃತ್ಯ ಎಸಗಿರಬಹುದಾ? ಎಂಬ ಸಂಶಯ ಕಾಡುತ್ತಿದೆ.
ಹುಲ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.