ಕೆ.ಆರ್.ಪೇಟೆ: ಹುಚ್ಚು ನಾಯಿಯೊಂದು ತಾಲೂಕಿನ ವಿವಿಧ ಗ್ರಾಮಗಳ ಜನವಸತಿ ಪ್ರದೇಶದಲ್ಲಿ ಓಡಾಡಿ ಜನರ ಮೇಲೆ ದಾಳಿ ನಡೆಸಿ ಇಬ್ಬರು ಮಕ್ಕಳು ಹಾಗೂ ಹದಿನಾರು ಮಹಿಳೆಯರು ಸೇರಿದಂತೆ ಸುಮಾರು 45ಕ್ಕೂ ಹೆಚ್ಚು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ.
ತಾಲೂಕಿನ ಚಿಲ್ಲದಹಳ್ಳಿಯ ಪೂಜಾ, ಅಭಿಷೇಕ್, ಪುರ ಗ್ರಾಮದ ರಾಮೇಗೌಡ, ನಂಜೇಗೌಡ, ಹೊಸಹೊಳಲಿನ ಭಾಗ್ಯಲಕ್ಷ್ಮೀ, ಮಂಜುನಾಥ್, ಮಂಜು, ಮಹದೇವ್, ಖಲೀಲ್ ಉಲ್ಲಾ ಬಗಾದಿ, ವೆಂಟರಾಂಶೆಟ್ಡಿ, ಕೆ.ಆರ್.ಪೇಟೆಯ ರಾಜು, ಹೇಮಕುಮಾರಿ ಸೇರಿದಂತೆ 45ಮಂದಿ ಹುಚ್ಚು ನಾಯಿ ದಾಳಿಗೆ ತುತ್ತಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಲ್ಲದಹಳ್ಳಿಯಲ್ಲಿ ಇಬ್ಬರಿಗೆ, ಬೊಮ್ಮೇನಹಳ್ಳಿಯಲ್ಲಿ 4ಮಂದಿಗೆ, ಯಡಹಳ್ಳಿಯಲ್ಲಿ ಒಬ್ಬರಿಗೆ, ಮತ್ತಿಘಟ್ಟದಲ್ಲಿ ಇಬ್ಬರಿಗೆ, ಹೊಸಹೊಳಲಿನಲ್ಲಿ 8ಮಂದಿಗೆ, ಕೆ.ಆರ್.ಪೇಟೆ ಟೌನಲ್ಲಿ ಇಬ್ಬರಿಗೆ, ಮಾಕವಳ್ಳಿಯಲ್ಲಿ ಇಬ್ಬರಿಗೆ, ಹೆಗ್ಗಡಹಳ್ಳಿಯಲ್ಲಿ ಮೂವರಿಗೆ, ಕೋರಮಂಡಲ್ ಸಕ್ಕರೆ ಬಳಿ ಕಬ್ಬು ಕಡಿಯುವ ಐವರು ಕಾರ್ಮಿಕರಿಗೆ ಹುಚ್ಚು ನಾಯಿ ಕಡಿದು ಗಾಯಗೊಳಿಸಿದೆ. ಹುಚ್ಚು ನಾಯಿ ಕಡಿತಕ್ಕೆ ಒಳಗಾದ ಎಲ್ಲ 45ಮಂದಿಗೆ ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆ ಕಳುಹಿಸಿ ಕೊಡಲಾಯಿತು ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರವಿ ಅವರು ಮಾಹಿತಿ ನೀಡಿದ್ದಾರೆ.
ಹುಚ್ಚು ನಾಯಿಯ ಸರಣಿ ದಾಳಿಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಸಂಬಂಧಪಟ್ಟವರು ಹುಚ್ಚುನಾಯಿಯನ್ನು ಸೆರೆ ಹಿಡಿದು ಸಾರ್ವಜನಿಕರ ಆತಂಕವನ್ನು ದೂರ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಏಳೆಂಟು ಗ್ರಾಮಗಳ ಸುಮಾರು 45ಕ್ಕೂ ಹೆಚ್ಚು ಮಂದಿಗೆ ಹುಚ್ಚು ನಾಯಿ ಕಡಿದು 48ಗಂಟೆಗಳು ಕಳೆದರೂ ಸಂಬಂಧ ಅಧಿಕಾರಿಗಳು ನಾಯಿಯನ್ನು ಹಿಡಿದು ಸಾರ್ವಜನಿಕರ ಆತಂಕವನ್ನು ದೂರ ಮಾಡಬೇಕೆಂದು ತಾಲ್ಲೂಕು ಜೆಡಿಎಸ್ ಹಿರಿಯ ಮುಖಂಡರಾದ ಬಿ.ಎಲ್.ದೇವರಾಜು ಅವರು ಆಗ್ರಹಿಸಿದ್ದಾರೆ.