ಮಡಿಕೇರಿ: ವನ್ಯ ಪ್ರಾಣಿಗಳಿಂದ ತಯಾರಿಸಿದ ವಸ್ತುಗಳ ಬಳಕೆಗೆ ಇರುವ ನಿಷೇಧದ ಬಗ್ಗೆ ಕೊಡಗಿನ ಜನತೆ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಧೈರ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪೊನ್ನಣ್ಣ ಅವರು ಅರಣ್ಯ ಇಲಾಖೆಯು ಇಂತಹ ವಸ್ತುಗಳನ್ನು ಹಿಂದುರಿಗಸಲು ದಿನ ನಿಗದಿ ಪಡಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದು ಇದರಿಂದ ಕೊಡಗಿನ ಜನತೆಗೆ ತೊಂದರೆಯಾಗಲಿದೆ. ಕೊಡಗಿನಲ್ಲಿ ಪಾರಂಪರಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಐನ್ ಮನೆಗಳಲ್ಲಿ , ದೇವಸ್ಥಾನಗಳಲ್ಲಿ ಹಾಗೂ ಪೀಚೆ ಕತ್ತಿ ಮುಂತಾದ ಆಭರಣಗಳಲ್ಲಿ ತಲತಲಾಂತರದಿಂದ ವನ್ಯ ಜೀವಿಯ ಉತ್ಪನ್ನಗಳನ್ನು ಬಳಕೆ ಮಾಡಲಾಗಿದ್ದು ಇವುಗಳ ರಕ್ಷಣೆಯ ಜವಾಬ್ದಾರಿ ತಮ್ಮ ಮೇಲಿದ್ದು ವಿಚಾರವನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರ ಗಮನಕ್ಕೆ ತರಲಾಗಿದೆ. ಸರ್ಕಾರದ ಮಟ್ಟದಲ್ಲಿ ಪರಿಹಾರ ಸಿಗದೇ ಇದ್ದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರಿಹಾರ ಒದಗಿಸಲು ತಾವು ಬದ್ದರಿದ್ದು ಯಾರು ಕೂಡ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಎ.ಎಸ್.ಪೊನ್ನಣ್ಣ ಭರವಸೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ಅವರು, ವನ್ಯಜೀವಿಗಳ ಉತ್ಪನ್ನ ಬಳಕೆಯ ಬಗ್ಗೆ 1989 ರಲ್ಲಿ ಕರ್ನಾಟಕದ ಸರ್ಕಾರದ ಚೀಫ್ ವೈಲ್ಡ್ ಲೈಫ್ ವಾರ್ಡನ್ 6 /11 /1989 ರಂದು ಕೊಡಗಿನ ಕೆ.ಎ.ಕಾರ್ಯಪ್ಪ ಎಂಬುವರು ಮಾಲಿಕತ್ವದ ಬಗ್ಗೆ ಹಾಕಿರುವ ಅರ್ಜಿಗೆ ಪತ್ರ ನೀಡಿರುವ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅನ್ವಯ ವನ್ಯಜೀವಿಗಳ ಉತ್ಪನ್ನ ಕ್ಕೆ ಯಾವುದೇ ಮಾಲಿಕತ್ವದ ದೃಢೀಕರಣ ಪತ್ರದ ಅವಶ್ಯಕತೆ ಇರುವುದಿಲ್ಲ ಎಂಬುದನ್ನು ದೃಢೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎ.ಎಸ್ ಪೊನ್ನಣ್ಣನವರು ನೀಡಿರುವ ಹೇಳಿಕೆಯಂತೆ ಜಿಲ್ಲೆಯ ಜನತೆ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.