ಮಡಿಕೇರಿ: ಎರಡು ದಿನಗಳ ಹಿಂದಷ್ಟೇ ಭೂಕಂಪನವಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕು ಹಾಗೂ ಕೊಡಗಿನ ಗಡಿಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದೆ. ಕೊಡಗು ಮತ್ತು ದಕ್ಷಿಣಕನ್ನಡದ ಗಡಿಭಾಗದ ಜನರಲ್ಲಿ ಮತ್ತೆ ಭಯ ಶುರುವಾಗಿದೆ. ಮೇಲಿಂದ ಮೇಲೆ ಭೂಮಿಯ ಕಂಪನ ಜತೆಗೆ ಭಾರೀ ಮಳೆ ಸುರಿಯುತ್ತಿರುವುದು ಈ ಬಾರಿಯೂ ದುರಂತ ಸಂಭವಿಸುವ ಮುನ್ಸೂಚನೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತಿದೆ.
ಕಳೆದೊಂದು ವರ್ಷದ ಬಳಿಕ ಯಾವುದೇ ಭಯವಿರಲಿಲ್ಲ. ಕಳೆದ ಬಾರಿ ಭೂಕುಸಿತವಾಗಲೀ. ಮಹಾಮಳೆಯಾಗಲೀ ಸುರಿದಿರಲಿಲ್ಲ. ಆದರೆ 2018ರಲ್ಲಿ ಸಂಭವಿಸಿದ ದುರಂತದಿಂದ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಜನ ಸಂಕಷ್ಟ ಅನುಭವಿಸಿದ್ದರು. ಎಲ್ಲವೂ ಸರಿ ಹೋಯಿತು ಎನ್ನುವಾಗಲೇ ಇದೀಗ ಭೂಮಿ ಕಂಪಿಸಿದ ಅನುಭವವಾಗುತ್ತಿರುವುದು ಕೊಡಗು ಹಾಗೂ ದಕ್ಷಿಣ ಕನ್ನಡದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಭೂಮಿ ಕಂಪಿಸಿದ ಅನುಭವವಾಗಿತ್ತು. ಅದು ಮರೆಯುವ ಮುನ್ನವೇ ಮಂಗಳವಾರ ಮತ್ತೆ ಕೊಡಗಿನ ಗಡಿಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆಲವೆಡೆ ಬೆಳಿಗ್ಗೆ 7.46ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ಮನೆಯಿಂದ ಹೊರಗೆ ಓಡಿ ಬಂದಿರುವ ಘಟನೆಯೂ ನಡೆದಿದೆ. ಸುಳ್ಯ ಪಟ್ಟಣ, ಉಬರಡ್ಕ, ಮಡಪ್ಪಾಡಿ, ಕೊಲ್ಲಮೊಗ್ರು, ಕಲ್ಮಕಾರು, ದೇವಚಳ್ಳ, ಜಾಲ್ಸುರು, ಆಲೆಟ್ಟಿ, ಐವರ್ನಾಡು, ಅಮರಮುಡ್ನೂರು, ಸಂಪಾಜೆ, ಗುತ್ತಿಗಾರು ಸೇರಿದಂತೆ ಹಲವು ಕಡೆಗಳಲ್ಲಿ ಸುಮಾರು 10ರಿಂದ 15 ಸೆಕೆಂಡುಗಳ ಕಾಲ ಭೂಮಿ ಅಲ್ಲಾಡಿದ ಅನುಭವವಾಗಿರುವುದಾಗಿ ಜನರು ಹೇಳಿಕೊಂಡಿದ್ದಾರೆ.
ಕಡಬ ತಾಲೂಕಿನ ಸುಬ್ರಹ್ಮಣ್ಯ, ಐನೆಕಿದು, ಕೊಡಗು ಜಿಲ್ಲೆಯ ಕರಿಕೆ, ಭಾಗಮಂಡಲ, ಸಂಪಾಜೆ, ಕಾಸರಗೋಡು ಗಡಿಭಾಗ ಪಾಣತ್ತೂರು, ಕಲ್ಲಪ್ಪಳ್ಳಿ ಭಾಗಗಳಲ್ಲೂ ಭೂಕಂಪನ ಅನುಭವವಾಗಿದೆ ಎಂದು ತಿಳಿದುಬಂದಿದೆ.
ಸುಳ್ಯದ ಕುರುಂಜಿಗುಡ್ಡೆ, ಜಾಲ್ಸೂರು ಗ್ರಾಮದ ಸೋಣಂಗೇರಿ ಭಾಗಗಳಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಬಗ್ಗೆ ಮಾಹಿತಿ ತಿಳಿದುಬಂದಿದೆ..
ಮಳೆಗಾಲ ಆರಂಭದ ಈ ಸಮಯದಲ್ಲಿ ಭೂಮಿಕಂಪಿಸುತ್ತಿರುವುದು ಜನರಲ್ಲಿ ಭಯವನ್ನು ಹುಟ್ಟು ಹಾಕಿದೆ. ಈಗಾಗಲೇ ಸಾಕಷ್ಟು ಪ್ರಾಕೃತಿಕ ವಿಕೋಪಗಳನ್ನು ನೋಡಿರುವ ಜನ ಮುಂದೆ ಯಾವ ರೀತಿಯ ಅನಾಹುತ ಸಂಭವಿಸುತ್ತದೆಯೋ ಎಂಬ ಭಯದಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.