ಕುಶಾಲನಗರ: ಸಮೀಪ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಅಣ್ಣಪ್ಪ ಎಂಬುವರ ಮಗ ಹಾರಂಗಿ ಎಡದಂಡೆ ನಾಲೆಯಲ್ಲಿ ಏಡಿ ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.
ಮದಲಾಪುರ ಬಳಿಯ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಅನಿತ್ (14) ಮೃತಪಟ್ಟ ದುರ್ದೈವಿ.
ಅನಿತ್ ತನ್ನ ಗೆಳೆಯರಾದ ಸಂಚು, ಅಬ್ಬಿ ಎಂಬುವರೊಂದಿಗೆ ದಿನಂಪ್ರತಿಯಂತೆ ಅವರ ಮನೆಯಿಂದ ಶಾಲೆಗೆ ಹೊರಟು ಸಮೀಪದ ಮುಖ್ಯ ನಾಲೆಯ ರಸ್ತೆಯ ಮೂಲಕ ಕೂಡಿಗೆಯ ಸದ್ಗುರು ಅಪ್ಪಯ್ಯ ಪ್ರೌಢಶಾಲೆ ಹೋಗುವ ಸಂದರ್ಭದಲ್ಲಿ ತುಂಬಿ ಹರಿಯುತ್ತಿದ್ದ ನಾಲೆಯ ಬದಿಯಲ್ಲಿ ಏಡಿ ಕಾಣಿಸಿಕೊಂಡ ಸಂದರ್ಭದಲ್ಲಿ ಅನಿತ್ ಎಂಬಾತ ಏಡಿಯನ್ನು ಹಿಡಿಯಲು ಹೋಗಿ ನಾಲೆಯ ಅಂಚಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಇವನನ್ನು ರಕ್ಷಿಸಲು ಹೋದ ಇನ್ನೊಬ್ಬ ವಿದ್ಯಾರ್ಥಿ ಅಭಿ ಎಂಬುವವನು ನೀರಿನಲ್ಲಿ ಈಜುಕೊಂಡು ನಾಲೆಯ ದಂಡೆ ಮೇಲೆ ಬಂದಿದ್ದಾನೆ ಶಾಲಾ ವಿದ್ಯಾರ್ಥಿಯು ನೀರಿನಲ್ಲಿ ಮುಳುಗಿದ ವಿಷಯವನ್ನು ಹಾರಂಗಿಯ ನೀರಾವರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದ ನಂತರ ಒಂದು ಗಂಟೆಗಳ ಕಾಲ ನಾಲೆಯಲ್ಲಿ ನೀರನ್ನು ಸ್ಥಗಿತಗೊಳಿಸಲಾಗಿ ಅಗ್ನಿಶಾಮಕ ದಳದ ಮೂಲಕ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಬಿದ್ದ ಜಾಗದಿಂದ ನೂರು ಮೀಟರ್ ದೂರದದಲ್ಲಿ ಶವ ಪತ್ತೆಯಾಗಿದೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ ಪ್ರಕರಣವು ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.