ಸೋಮವಾರಪೇಟೆ: ತಾಲ್ಲೂಕು ಕಚೇರಿ ಹಾಗೂ ನಾಡಕಚೇರಿಗಳಲ್ಲಿ ರೈತರ ಕೆಲಸಗಳು ನಿಗದಿತ ಸಮಯದಲ್ಲಿ ಮಾಡಿಕೊಡಲು ಕ್ರಮಕೈಗೊಳ್ಳುವಂತೆ ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಎಸ್.ಎನ್.ನರಗುಂದ್ ಅವರಿಗೆ ಮನವಿ ಮಾಡಿದ್ದಾರೆ.
ಸೋಮವಾರದಂದು ತಾಲ್ಲೂಕು ಕಚೇರಿಗೆ ತೆರಳಿದ ರೈತಸಂಘದ ಪದಾಧಿಕಾರಿಗಳು ಶಾಂತಳ್ಳಿ ಹೋಬಳಿಯಲ್ಲಿ ಗ್ರಾಮಲೆಕ್ಕಿಗರು ನಿಗದಿತ ಸಮಯದಲ್ಲಿ ಸಿಗುತ್ತಿಲ್ಲ. ಈ ಹಿಂದೆ ಕೂತಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿಗಳು ರೈತರ ಸಮಸ್ಯೆ ಆಲಿಸಿದರು. ಕೂಡಲೆ ಪೌತಿ ಖಾತೆ ಮಾಡಿಕೊಡುವಂತೆ ತಿಳಿಸಿದ್ದರು. ಆದರೆ ಇದುವರಗೆ ಒಂದು ಪೌತಿ ಖಾತೆಯನ್ನು ಮಾಡಿಸಿಕೊಟ್ಟಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್ ತಿಳಿಸಿದರು.
ಚುನಾವಣೆ ಸಂಬoಧಿತ ಸಭೆ ಎಂಬ ನೆಪದಲ್ಲಿ ಗ್ರಾಮಲೆಕ್ಕಿಗರು ರೈತರ ಕೈಗೆ ಸಿಗುತ್ತಿಲ್ಲ. ಇನ್ನು ಚುನಾವಣೆ ದಿನಾಂಕವೇ ನಿಗದಿಯಾಗಿಲ್ಲ. ಈಗಿಂದಲೆ ರೈತರ ಕೆಲಸ ಆಗುತ್ತಿಲ್ಲ. ಮುಂದಿನ ಪರಿಸ್ಥಿತಿ ಏನಾಗಲಿದೆಯೋ ಎಂದು ಪ್ರಶ್ನಿಸಿದರು. ಚುನಾವಣೆ ದಿನಾಂಕ ಪ್ರಕಟವಾದರೂ ತಾಲ್ಲೂಕು ಕಚೇರಿಯಲ್ಲಿ ರೈತರಿಗೆ ಆಗಬೇಕಾದ ಕೆಲಸಗಳು, ವಿದ್ಯಾರ್ಥಿಗಳಿಗೆ ಆದಾಯ, ಜಾತಿದೃಢೀಕರಣ ಪತ್ರಗಳು ಸಕಾಲಕ್ಕೆ ಸಿಗುವಂತಾಗಬೇಕು ಎಂದು ರೈತ ಮುಖಂಡರು ಮನವಿ ಮಾಡಿದರು.
ರೈತರ ಕೆಲಸಗಳನ್ನು ಸಕಾಲದಲ್ಲಿ ಮಾಡಲು ಕ್ರಮಕೈಗೊಳ್ಳಲಾಗುವುದು. ಅರ್ಜಿಗಳ ವಿಲೇವಾರಿ ವಿಳಂಬ ಇನ್ನಿತರ ಸಮಸ್ಯೆಗಳಿದ್ದರೆ ತನ್ನ ಗಮನಕ್ಕೆ ತಂದರೆ, ತ್ವರಿತ ಅರ್ಜಿ ವಿಲೇವಾರಿಗೆ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ನರಗುಂದ ರೈತ ಮುಖಂಡರಿಗೆ ಭರವಸೆ ನೀಡಿದರು.
ಅನೇಕ ರೈತರ ದುರಸ್ತಿ ಫೈಲುಗಳು ಕೆಲ ವರ್ಷಗಳಿಂದ ತಾಲ್ಲೂಕು ಕಚೇರಿಯಲ್ಲೇ ಧೂಳು ತಿನ್ನುತ್ತಿವೆ. ಆದರೆ ನಗರ ಪ್ರದೇಶದ ಶ್ರೀಮಂತರ ದುರಸ್ತಿ ಫೈಲ್ಗಳು ಒಂದು ತಿಂಗಳಲ್ಲೇ ವಿಲೇವಾರಿ ಆಗಿ ದುರಸ್ತಿಯಾಗಿರುವ ಪವಾಡಗಳು ನಡೆಯುತ್ತಿವೆ ಎಂದು ಲಿಂಗೇರಿ ರಾಜೇಶ್ ಹೇಳಿದರು. ತಮ್ಮ ಜಾಗದ ದುರಸ್ತಿ ಕಡತ ಮೂರು ವರ್ಷದಿಂದ ತಾಲ್ಲೂಕು ಕಚೇರಿಯಲ್ಲೇ ಧೂಳು ತಿನ್ನುತ್ತಿರುವ ಬಗ್ಗೆ ರೈತ ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಹೇಳಿದರು. ವಿಲೇವಾರಿಗೆ ಕ್ರಮಕೈಗೊಳ್ಳುವ ಬಗ್ಗೆ ತಹಸೀಲ್ದಾರ್ ಭರವಸೆ ನೀಡಿದರು. ಅನೇಕ ರೈತರು ತಮ್ಮ ಆಹವಾಲು ಹೇಳಿದರು.